ಬೆಂಗಳೂರು: ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ರೊಬ್ಬರು ಕಾರಿನಲ್ಲೇ ಅನುಮಾನಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕುರಬರಹಳ್ಳಿ ಜಂಕ್ಷನ್ ಬಳಿ ನಡೆದಿದೆ.
ಮಹಾಲಕ್ಷ್ಮೀ ಲೇಔಟ್ನ 51 ವರ್ಷದ ವಿಜಯ್ಕುಮಾರ್ ಮೃತ ಟೆಕ್ಕಿ ಆಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ವಿಜಯ್ ಕುಮಾರ್ ಬಳಲುತ್ತಿದ್ದರು. ಇನ್ನು ಕಾರಿನ ಒಳಗೆ ಅವರ ಮೃತದೇಹ ಪತ್ತೆಯಾಗಿದೆ. ಆದರೆ ಕಾರಿಗೆ ಹೊದಿಕೆ ಮುಚ್ಚಿದ್ದ ಕಾರಣ ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.
ವಿಜಯ್ ಕುಮಾರ್ ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಲಾಗಿದ್ದು ಜತೆಗೆ ನೈಟ್ರೋಜನ್ ಆಕ್ಸಿಜನ್ ಪೈಪ್ ಅನ್ನು ಮೂಗಿಗೆ ಬಿಟ್ಟಿರುವ ಸ್ಥಿತಿಯಲ್ಲಿತ್ತು. ಇನ್ನು ಅನಾರೋಗ್ಯದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ವಿಜಯ್ ಕುಮಾರ್ ಹೃದಯ ಸಂಬಂಧಿ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಹಲವು ಬಾರಿ ಪತ್ನಿ ಹತ್ತಿರ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯವನ್ನು ಪ್ರಸ್ತಾಪಿಸಿದ್ದರು. ಕಾರನ್ನು ವಾಷ್ ಮಾಡಿಸುವ ನೆಪದಲ್ಲಿ ಮನೆಯಿಂದ ಹೊರಗೆ ಬಂದಿದ್ದ ವಿಜಯ್ಕುಮಾರ್, ಪಾನಿಪುರಿ ಅಂಗಡಿಗಿಂತ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುಸ್ತಾಗಿದೆ ನಿದ್ರೆ ಮಾಡಬೇಕೆಂದು ಸಾರ್ವಜನಿಕರ ಬಳಿ ಸಹಾಯ ಪಡೆದು ಕಾರಿಗೆ ಹೊದಿಕೆ ಹಾಕಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲಾಗಲೇ ಟೆಕ್ಕಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿರುವ ಉತ್ತರ ವಿಭಾಗದ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Advertisement