ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನವು ಬಿಬಿಎಂಪಿ ಮಾಲೀಕತ್ವದಲ್ಲಿ ಇಲ್ಲ. ಖಾತೆ ಮಾಡಿಸಿಕೊಳ್ಳಲು ವಕ್ಫ್ ಮಂಡಳಿ ಅರ್ಜಿ ಸಲ್ಲಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬುಧವಾಹ ಮಹತ್ವದ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗ ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವ ಅಧಿಕಾರ ನಮಗೆ ಇಲ್ಲ. ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ವಕ್ಪ್ ಬೋರ್ಡ್ ನಮ್ಮ ಗಮನಕ್ಕೆ ತಂದಿರುವ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಈದ್ಗಾ ಮೈದಾನ ಬಿಬಿಎಂಪಿ ಮಾಲೀಕತ್ವದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಸರ್ವೆ ನಡೆದಾಗ ಈದ್ಗಾ ಮೈದಾನವು ನಮ್ಮದು ಎಂದು ಯಾರೂ ಹೆಸರು ಬರೆಸಲಿಲ್ಲ. ಹೀಗಾಗಿ ಅದು ಬಿಬಿಎಂಪಿ ಹೆಸರಿಗೆ ಬಂದಿದೆ. ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ವಕ್ಫ್ ಮಂಡಳಿ ಅರ್ಜಿ ಸಲ್ಲಿಸಬಹುದು. ಅವರು ಅರ್ಜಿ ಸಲ್ಲಿಸಿದರೆ ದಾಖಲೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈದ್ಗಾ ಮೈದಾನ ತನ್ನ ಸುಪರ್ಧಿಯಲ್ಲಿದ್ದು ತನಗೆ ಸೇರಿದ್ದು. ಮುಸ್ಲಿಂರಿಗೆ ವರ್ಷದಲ್ಲಿ ಎರಡು ಸಲ ನಮಾಜ್ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ಈ ಹಿಂದೆ ಬಿಬಿಎಂಪಿ ಹೇಳಿತ್ತು. ಇದಕ್ಕೆ ಪ್ರತಿಯಾಗಿ ವಕ್ಫ್ ಮಂಡಳಿ ಈ ಆಟದ ಮೈದಾನ ತನಗೆ ಸೇರಿದ್ದು. ಸುಪ್ರೀಂ ಕೋರ್ಟ್ ಸಹ ತಮ್ಮ ಪರವಾಗಿ ತೀರ್ಪನ್ನು ನೀಡಿದೆ ಎಂದಿದ್ದು. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ವಕ್ಫ್ ಮಂಡಳಿಗೆ ನೊಟೀಸ್ ನೀಡಿ ತಮ್ಮ ಬಳಿಯಲ್ಲಿರುವ ಮೈದಾನದ ದಾಖಲೆ ಪತ್ರವನ್ನು ಒದಗಿಸುವಂತೆ ಕೇಳಿತ್ತು. ವಕ್ಫ್ ಮಂಡಳಿ ಸಹ ದಾಖಲೆ ಪತ್ರವನ್ನು ನೀಡಿತ್ತು.
ಹಿಂದೂ ಸಂಘಟನೆಗಳು ಈ ಹಿಂದೆ ಜಮೀನು ಪಾಲಿಕೆ ಆಸ್ತಿ ಎಂದು ಹೇಳಿಕೊಂಡಿತ್ತು ಮತ್ತು ಶಾಸಕ ಬಿ.ಝಡ್.ಜಮೀರ್ ಅಹಮ್ಮದ್ ಖಾನ್, ಬಿಜೆಪಿ ನಾಯಕಿ ಪ್ರೀಮಿಳಾ ನೇಸರ್ಗಿ, ಶಾಸಕ ಆರ್.ವಿ.ದೇವರಾಜ್ ಮತ್ತು ನ್ಯಾಯವ್ಯಾಪ್ತಿಯ ಎಸಿಪಿ ಹಾಜರಿದ್ದ ಶಾಂತಿ ಸಮಿತಿಯ ನಡಾವಳಿ ಪ್ರತಿ ತನ್ನ ಬಳಿಯಿರುವುದಾಗಿ ತಿಳಿಸಿತ್ತು.
ಈ ಪತ್ರದಲ್ಲಿ ರಂಜಾನ್ ಮತ್ತು ಬಕ್ರೀದ್ ಪ್ರಾರ್ಥನೆಗಳ ಜೊತೆಗೆ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೂ ಭೂಮಿಯನ್ನು ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ ಎಂದು ಸಂಘಟನೆ ತಿಳಿಸಿತ್ತು. ಆದರೆ, ಈ ಪ್ರಸ್ತಾವನೆಯು ತಿರಸ್ಕೃತಗೊಂಡಿತ್ತು ಎಂದು ಕೇಂದ್ರ ಮುಸ್ಲಿಂ ಸಂಘ (ಸಿಎಂಸಿ) ಹೇಳಿತ್ತು.
Advertisement