ಅಕ್ರಮ ಸಂಬಂಧ: ಪ್ರಿಯಕರನೊಂದಿಗೆ ಸೇರಿ ಪತಿಯ ಸಜೀವ ದಹಿಸಿದ ಪತ್ನಿ!

ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಸಜೀವವಾಗಿ ದಹಿಸಿರುವ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಸಜೀವವಾಗಿ ದಹಿಸಿರುವ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ.

ಮರಳವಾಡಿ ನಿವಾಸಿ ಎಂ ಕಿರಣ್ ಗೌಡ ಅಲಿಯಾಸ್ ಡಾಕ ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಕಿರಣ್ ರಾಮನಗರದ ಜೆಡಿಎಸ್ ಮುಖಂಡರೊಬ್ಬರ ಪುತ್ರರಾಗಿದ್ದಾರೆಂದು ಹೇಳಲಾಗುತ್ತಿದೆ.

ಪತ್ನಿ ಚೈತ್ರಾ ನೀಡಿದ್ದ ಸುಪಾರಿ ಮೇರೆಗೆ ಕಿರಣ್ ಅವರನ್ನು ಗುಂಪೊಂದು ಹತ್ಯೆ ಮಾಡಿದೆ ಎನ್ನಲಾಗಿದೆ. ಈ ಗುಂಪಿನಲ್ಲಿ ಕಿರಣ್ ಪತ್ನಿ ಚೈತ್ರಾ ಪ್ರಿಯಕರ ಯಶ್ವಂತ್ ಗೌಡ ಇದ್ದಾನೆಂದು ತಿಳಿದುಬಂದಿದೆ. ಕಿರಣ್ ಅವರು ನಾಲ್ಕು ವರ್ಷಗಳ ಹಿಂದೆ ಚೈತ್ರಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಎರಡೂವರೆ ವರ್ಷದ ಮಗನಿದ್ದಾನೆ.

ಕಳೆದ ಶುಕ್ರವಾರ ರಾತ್ರಿ 9.45ರ ಸುಮಾರಿಗೆ ತೇರುಬೀದಿ ರಸ್ತೆಯ ಅನ್ನಪೂರ್ಣೇಶ್ವರಿ ಆಶ್ರಮದ ಬಳಿ ಯಾರೂ ಓಡಾಡದ ಪ್ರದೇಶದಲ್ಲಿ ಕಿರಣ್ ಅವರನ್ನು ಹತ್ಯೆ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಚೈತ್ರಾ (ಕಿರಣ್ ಅವರ ಪತ್ನಿ), ಕಾರ್ತಿಕ್, ತಾಯಪ್ಪ ಮತ್ತು ಅಣ್ಣಯ್ಯ ಪ್ರಕರಣದ ಆರೋಪಿಗಳೆಂದು ತಿಳಿದುಬಂದಿದೆ.

ಕಿರಣ್ ಚಿಕನ್ ಸ್ಟಾಲ್ ವೊಂದನ್ನು ನಡೆಸುತ್ತಿದ್ದು, ಕಳೆದ ಶುಕ್ರವಾರ ರಾತ್ರಿಯಿಂದ ಪುತ್ರ ನಾಪತ್ತೆಯಾಗಿದ್ದಾನೆಂದು ಮರಳವಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ದಾಸಪ್ಪ ಅಲಿಯಾಸ್ ತಮ್ಮಯ್ಯಣ್ಣ (64) ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಯಶವಂತ್ ಗೌಡ ಮೇಲೆ ಶಂಕೆಗಳನ್ನು ವ್ಯಕ್ತಪಡಿಸಿದ್ದರು. ಇದರಂತೆ ಪೊಲೀಸರು ಯಶವಂತ್ ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಅನ್ನಪೂರ್ಣೇಶ್ವರಿ ಆಶ್ರಮದ ಹೊರವಲಯದಲ್ಲಿ ಕಿರಣ್ ನನ್ನು ಸಜೀವವಾಗಿ ದಹಿಸಿದ ಆರೋಪಿಗಳು ನಂತರ ಅರೆ ಬೆಂದ ದೇಹವನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದಾರೆ. ವಿಚಾರಣೆ ವೇಳೆ ಈ ವಿಚಾರವನ್ನು ಆರೋಪಿಗಳು ಬಾಯ್ಬಿಟ್ಟಿದ್ದು, ಇದೀಗ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com