ಬೆಂಗಳೂರು: ಸೋಮವಾರ ಇಡಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ಹೇಳಿದ್ದಾರೆ.
ನವೆಂಬರ್ 7 ರಂದು ತನ್ನ ಮುಂದೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದ ಕುರಿತಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ , ನನ್ನ ಸಹೋದರ ಮತ್ತು ನನ್ನನ್ನು ಇಡಿ ವಿಚಾರಣೆಗೆ ಕರೆಸಲಾಗಿದೆ. ನವೆಂಬರ್ 7 ರಂದು ನಮ್ಮ ರಾಷ್ಟ್ರೀಯ ಅಧ್ಯಕ್ಷರ ಕಾರ್ಯಕ್ರಮಗಳಲ್ಲಿ ನಾನು ನಿರತನಾಗಿದ್ದೇನೆ, ಪಕ್ಷದ ಕಾರ್ಯಕರ್ತರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು.
ಪದೇ ಪದೇ ಇ.ಡಿ.ಸಮನ್ಸ್ ನೀಡಿ ಹಿಂಸೆ
ಈ ಹಿಂದೆಯೂ ಕೂಡ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್, 'ಜಾರಿ ನಿರ್ದೇಶನಾಲಯದ (ಇ.ಡಿ) ಸಮನ್ಸ್ ಮೇರೆಗೆ ಇತ್ತೀಚೆಗಷ್ಟೇ ನಾನು ಹಾಗೂ ನನ್ನ ಸಹೋದರ ಹೋಗಿ ಉತ್ತರ ಕೊಟ್ಟಿದ್ದೇವೆ. ಇದೀಗ ಮತ್ತೆ ನ.7ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಬಂದಿದೆ. ಇ.ಡಿ. ಅವರು ಯಾಕೆ ಪದೇ ಪದೇ ಕರೆದು ಹಿಂಸೆ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದರು.
Advertisement