ವಾಹನ ನಿಲುಗಡೆ ವಿಚಾರಕ್ಕೆ ಜಗಳ: ವ್ಯಕ್ತಿ, ಆತನ ಕುಟುಂಬದ ಮೇಲೆ ಸ್ಥಳೀಯ ನಿವಾಸಿಗಳಿಂದ ಹಲ್ಲೆ!

ಜಯನಗರ 5ನೇ ಬ್ಲಾಕ್‌ನ 39ನೇ ಕ್ರಾಸ್‌ನಲ್ಲಿ ವಾಹನ ನಿಲುಗಡೆ ವಿಚಾರವಾಗಿ ನಡೆದ ಜಗಳದಲ್ಲಿ 53 ವರ್ಷದ ಮಹಿಳೆ ಸೇರಿದಂತೆ ಮೂವರ ಮೇಲೆ ಸ್ಥಳೀಯ ನಿವಾಸಿ ಹಾಗೂ ಆತನ ಚಾಲಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಯನಗರ 5ನೇ ಬ್ಲಾಕ್‌ನ 39ನೇ ಕ್ರಾಸ್‌ನಲ್ಲಿ ವಾಹನ ನಿಲುಗಡೆ ವಿಚಾರವಾಗಿ ನಡೆದ ಜಗಳದಲ್ಲಿ 53 ವರ್ಷದ ಮಹಿಳೆ ಸೇರಿದಂತೆ ಮೂವರ ಮೇಲೆ ಸ್ಥಳೀಯ ನಿವಾಸಿ ಹಾಗೂ ಆತನ ಚಾಲಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಹಲ್ಲೆಗೊಳಗಾದವರು ಬಸವನಗುಡಿ ನಿವಾಸಿಗಳಾಗಿದ್ದು, ಸಂಬಂಧಿಕರ ಗೃಹ ಪ್ರವೇಶ ಹಿನ್ನೆಲೆಯಲ್ಲಿ ಜಯನಗರಕ್ಕೆ ಬಂದಿದ್ದರು. ಲೆಕ್ಕ ಪರಿಶೋಧಕರಾಗಿರುವ ಬಸವನಗುಡಿಯ ಗೋವಿಂದ ರಸ್ತೆಯ ನಿವಾಸಿ ಎಸ್ ಅಮನ್ (29) ಅವರು ತಮ್ಮ ಎಸ್‌ಯುವಿ ವಾಹನವನ್ನು ಮನೆಯೊಂದರ ಬಳಿ ನಿಲ್ಲಿಸಿದ್ದರು, ಇದಕ್ಕೆ ಸ್ಥಳೀಯ ನಿವಾಸಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು, ಇಬ್ಬರ ನಡುವ ಮಾತಿನ ಚಕಮಕಿ ನಡೆದಿದೆ.

ಬುಧವಾರ ಬೆಳಿಗ್ಗೆ 9 ರಿಂದ 9.30 ರ ನಡುವೆ ಘಟನೆ ನಡೆದಿದ್ದು, ಅಮನ್, ಅವರ ತಾಯಿ ಅನಿತಾ ಮತ್ತು ಅವರ ಸೋದರ ಸಂಬಂಧಿ ತುಷಾರ್ ಮೇಲೆ ಸ್ಥಳೀಯ ನಿವಾಸಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಹಲ್ಲೆಗೊಳಗಾದ ಅಮನ್ ಅವರು ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಅಮನ್ ಅವರು ತಮ್ಮ ತಾಯಿ ಜೊತೆಗೆ ಜಯನಗರಕ್ಕೆ ಬಂದಿದ್ದು, ಮನೆಯೊಂದರ ಬಳಿ ಕಾರನ್ನು ನಿಲ್ಲಿಸಿ, ನಡೆದುಕೊಂಡು ಹೋಗುತ್ತಿದ್ದಾಗ, ಸ್ಥಳೀಯ ನಿವಾಸಿಯೊಬ್ಬರು ಕಾರು ತೆಗೆಯುವಂತೆ ಅವರನ್ನು ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅಮನ್ ಅವರನ್ನು ಥಳಿಸಿದ್ದಾರೆ. ಅಲ್ಲದೆ, ಬೆದರಿಕೆಯನ್ನೂ ಹಾಕಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೊಂದು ಕ್ಷುಲ್ಲಕ ವಿಚಾರವಾಗಿದ್ದು, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣ ಸಂಬಂಧ ಯಾರೊಬ್ಬರನ್ನೂ ಬಂಧನಕ್ಕೊಳಪಡಿಸಿಲ್ಲ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com