ಬೆಂಗಳೂರು: ಆರ್ಪಿಎಫ್ ಪೊಲೀಸರ ಸಮಯ ಪ್ರಜ್ಞೆಯಿಂದ ವ್ಯಕ್ತಿಯೊಬ್ಬರ ಜೀವ ಉಳಿದಿದ್ದು, ಹಳಿ ಮೇಲೆ ನಿಂತಿದ್ದಾತ ಸೂಪರ್ಫಾಸ್ಟ್ ರೈಲಿನಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಬೆಂಗಳೂರು ವಿಭಾಗದ ಕೃಷ್ಣರಾಜಪುರಂ ರೈಲು ನಿಲ್ದಾಣದಲ್ಲಿ ರೈಲ್ವೆ ಹಳಿ ಮೇಲೆ ಅತಿಕ್ರಮ ಪ್ರವೇಶ ಮಾಡಿ ಅಪಾಯಕ್ಕೆ ಸಿಲುಕಿದ್ದ ಪುರುಷ ಪ್ರಯಾಣಿಕರೊಬ್ಬರನ್ನು ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಮೂವರು ಪೊಲೀಸರು ಶುಕ್ರವಾರ ರಕ್ಷಿಸಿದ್ದಾರೆ. ಅದೇ ಹಳಿ ಮೇಲೆ ಕೆಲವೇ ಕ್ಷಣದಲ್ಲಿ ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಹಾದುಹೋಗುವುದರಲ್ಲಿತ್ತು. ಆದರೆ ಆರ್ ಪಿಎಫ್ ಸಿಬ್ಬಂದಿ ಸಮಯ ಪ್ರಜ್ಞೆ ಮೆರೆದು ಅವರನ್ನು ಹಳಿಯಿಂದ ಎಳೆದು ರಕ್ಷಿಸಿದ್ದಾರೆ.
ಪ್ರಯಾಣಿಕ ವ್ಯಕ್ತಿ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ಲಾಟ್ಫಾರ್ಮ್ 2 ಮತ್ತು 3ರ ನಡುವೆ ದಾಟಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕೆಳಗೆ ಬಿದ್ದಿದ್ದಾರೆ. ರೈಲು ನಂ. 12007 ಮೈಸೂರು-ಚೆನ್ನೈ ಶತಾಬ್ದಿ ಎಕ್ಸ್ ಪ್ರೆಸ್ ಸೂಪರ್ ಫಾಸ್ಟ್ ರೈಲು ಅದೇ ಟ್ರ್ಯಾಕ್ ನಲ್ಲಿ ಆಗಮಿಸುತ್ತಿತ್ತು. ಈ ವೇಳೆ ಪ್ಲಾಟ್ಫಾರ್ಮ್ನಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಜಿ ಡಿ ರವಿ ಮತ್ತು ಕಾನ್ಸ್ಟೆಬಲ್ಗಳಾದ ಪ್ರದೀಪ್ ಕುಮಾರ್ ಮತ್ತು ಮಂಜುರಾರ್ ಇದನ್ನು ಗಮನಿಸಿದ್ದಾರೆ. ಕೂಡಲೇ ಕೆಳಗೆ ಹಾರಿ, ಧಾವಿಸಿ ಅವರನ್ನು ಟ್ರ್ಯಾಕ್ಗಳಿಂದ ಸುರಕ್ಷಿತವಾಗಿ ಮೇಲಕ್ಕೆ ಎಳೆದೊಯ್ದರು ಎಂದು ಆರ್ಪಿಎಫ್ ಉನ್ನತ ಪೊಲೀಸ್ ತಿಳಿಸಿದ್ದಾರೆ.
"ಒಬ್ಬ ಪೋಲೀಸ್ ಅವನನ್ನು ಎತ್ತಿದಾಗ ಇನ್ನಿಬ್ಬರು ಬೇಗನೆ ಅವನನ್ನು ಟ್ರ್ಯಾಕ್ಗಳಿಂದ ತಳ್ಳಿದರು. ಹತ್ತು ಸೆಕೆಂಡುಗಳ ನಂತರ ಶತಾಬ್ದಿ ರೈಲು ಅದೇ ಸ್ಥಳದಲ್ಲಿ ಹಾದು ಹೋಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಟ್ಟಾರೆ ಆರ್ ಪಿಎಫ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ದುರಂತವೊಂದು ತಪ್ಪಿದೆ.
Advertisement