ಬೆಂಗಳೂರು: ನಡುರಸ್ತೆಯಲ್ಲಿ ಅಳಿಯನಿಂದ ಅತ್ತೆಯ ಬರ್ಬರ ಹತ್ಯೆ!

ನಡು ರಸ್ತೆಯಲ್ಲೇ ಅತ್ತೆಯನ್ನು ಅಳಿಯನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಡು ರಸ್ತೆಯಲ್ಲೇ ಅತ್ತೆಯನ್ನು ಅಳಿಯನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಬೆಟ್ಟೆಗೌಡನ ದೊಡ್ಡಿ ನಿವಾಸಿ ರತ್ನಮ್ಮ (46) ಹತ್ಯೆಯಾದ ದುರ್ದೈವಿ. ಸುಕೇಶ್ ಅಲಿಯಾಸ್ ಸುಕ್ಕಿ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.

ಮೃತ ರತ್ನಮ್ಮ ಅವರು ತಮ್ಮ ಮಗಳು ಮಾನಸಳನ್ನು ಸುಕೇಶ್ ಜೊತೆಗೆ ಮದುವೆ ಮಾಡಿಕೊಟ್ಟಿದ್ದರು. ಸುಕೇಶ್ ಸರಿಯಾಗಿ ಮಗಳನ್ನು ನೋಡಿಕೊಳ್ಳುತ್ತಿರಲಿಲ್ಲ. ಈ ವಿಚಾರವಾಗಿ ಹಲವಾರು ಬಾರಿ ಅಳಿಯನಿಗೆ ಬುದ್ಧಿವಾದ ಹೇಳಿದ್ದರೂ, ಕೇಳಿರಲಿಲ್ಲ.

ಈ ವಿಚಾರಕ್ಕೆ ಮಾನಸ ಬೇಸರಗೊಂಡು ಗಂಡನ ಮನೆಯಿಂದ ವಾಪಸ್ ತವರಿಗೆ ಬಂದು ನೆಲಸಿದ್ದಳು. ಮಾನಸಳನ್ನು ಮನೆಗೆ ವಾಪಸ್ ಕಳುಹಿಸಿಕೊಡಿ ಎಂದು ಸುಕೇಶ್ ಕೇಳಿದ್ದರೂ ಅತ್ತೆ ಕಳುಹಿಸಿರಲಿಲ್ಲ. ಇದೇ ಜಿದ್ದಿನಿಂದ ಅತ್ತೆಯನ್ನು ಸಾಯಿಸಲು ಸುಕ್ಕಿ ಸಂಚು ರೂಪಿಸಿದ್ದಾನೆ.

ಅದರಂತೆ ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಬೆಟ್ಟೆಗೌಡನಹಳ್ಳಿ ಗೇಟ್ ಬಳಿ ಬಸ್‍ಗಾಗಿ ಕಾಯುತ್ತಾ ರತ್ನಮ್ಮ ನಿಂತಿದ್ದರು. ಇದೇ ಸಮಯವನ್ನು ಕಾದಿದ್ದ ಅಳಿಯ ಸುಕೇಶ್ ತನ್ನ ಸಹೋದರ ಚಲುವರಾಜನೊಂದಿಗೆ ಸೇರಿಕೊಂಡು ಕಲ್ಲು, ದೊಣ್ಣೆಗಳಿಂದ ಮನ ಬಂದಂತೆ ಅತ್ತೆಗೆ ಹೊಡೆದಿದ್ದಾರೆ. ಹಲ್ಲೆ ಬಳಿಕ ಸ್ಥಳದಿಂದ ಪರಾರಿಯಾಗುವ ವೇಳೆ ತಲೆಗೆ ಕಲ್ಲಿನಿಂದ ತೀವ್ರವಾಗಿ ಹೊಡೆದಿದ್ದಾರೆ.

ಬಳಿಕ ಸ್ಥಳೀಯರು ಕನಕಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೋಡಿಹಳ್ಳಿ ಠಾಣೆ ಸಬ್ ಇನ್ಸ್‍ಪೆಕ್ಟರ್ ರವಿಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಆರೋಪಿ ಚೆಲುವರಾಜನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com