ಬೆಂಗಳೂರು: ಎಐಸಿಸಿ ಅಧ್ಯಕ್ಷ ಚುನಾವಣೆ ಬಳಿಕ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ. ನಗರದ ಹಲವು ಕಡೆಗಳಲ್ಲಿ ಸಚಿವರು, ಶಾಸಕರ ಸಾಧನೆಗಳನ್ನು ಬಿಂಬಿಸುವ ಹಾಗೂ ಹುಟ್ಟುಹಬ್ಬಗಳಿಗೆ ಶುಭಕೋರುವ ಬ್ಯಾನರ್ ಹಾಗೂ ಫ್ಲೆಕ್ಸ್ಗಳು ರಾರಾಜಿಸುತ್ತಿವೆ.
ಹೈಕೋರ್ಟ್ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ರಾಜಕಾರಣಿಗಳ ಬ್ಯಾನರ್ ಹಾಗೂ ಫ್ಲೆಕ್ಸ್ ಗಳು ನಗರದಲ್ಲಿ ರಾರಾಜಿಸುತ್ತಿದ್ದರೂ ಈ ವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ರಸೆಲ್ ಮಾರ್ಕೆಟ್ನಲ್ಲಿ, ಶಾಸಕ ರಿಜ್ವಾನ್ ಅರ್ಷದ್ ಅವರ ಬೆಂಬಲಿಗರು ಗೋಡೆಗಳ ಮೇಲೆ ಬ್ಯಾನರ್ಗಳನ್ನು ಹಾಕಿದ್ದಾರೆ, ಕೆಲವು ವಾರಗಳ ಹಿಂದೆ ಆಚರಿಸಲಾದ ಅವರ ಜನ್ಮದಿನಕ್ಕೆ ಬ್ಯಾನರ್ ಮೂಲಕ ಶುಭಾಶಯ ಕೋರಿದ್ದಾರೆ.
ಈ ಬ್ಯಾನರ್ ನ್ನು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಶಕೀಲ್ ಅಹ್ಮದ್ ಮತ್ತು ಅವರ ಬೆಂಬಲಿಗರು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ದೊಮ್ಮಲೂರಿನಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಬೆಂಬಲಿಗರು ಎಐಸಿಸಿ ನೂತನ ಅಧ್ಯಕ್ಷರಾಗಿ ಎಂ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಲಿ ಎಂದು ಬೃಹತ್ ಫ್ಲೆಕ್ಸ್ ಹಾಕಿದ್ದಾರೆ.
ಬಿಬಿಎಂಪಿ ಕಾಯಿದೆ, 2020 ರ ಅಡಿಯಲ್ಲಿ, ನಿರ್ದಿಷ್ಟವಾಗಿ 1981 ರ ತೆರೆದ ಸ್ಥಳಗಳ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಬಿಬಿಎಂಪಿ ಮಿತಿಗಳಲ್ಲಿ ಬ್ಯಾನರ್ಗಳು, ಬಂಟಿಂಗ್ಸ್, ಫ್ಲೆಕ್ಸ್ಗಳು ಮತ್ತು ಪೋಸ್ಟರ್ಗಳನ್ನು ಹಾಕುವುದನ್ನು ನಿಷೇಧಿಸುವ ಸೂಚನೆಗಳಿವೆ.
ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಸಿದ್ದರಾಮೋತ್ಸವ'ವನ್ನು ಆಚರಣೆ ಮಾಡಲಾಗಿತ್ತು. ಈ ವೇಳೆ ವಿಧಾನಸೌಧದ ಬಳಿಕ ಫ್ಲೆಕ್ಸ್ ಹಾಕಿದ್ದಕ್ಕಾಗಿ ಇಬ್ಬರು ಕಾಂಗ್ರೆಸ್ ನಾಯಕರ ವಿರುದ್ಧ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿದ್ದರು
ಅದೇ ರೀತಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆಂಬಲಿಗರು ವಿಧಾನಸೌಧ ಹಾಗೂ ರಾಜಭವನದಲ್ಲಿ ಬ್ಯಾನರ್ ಹಾಕಿದ್ದರು.
ಅಕ್ರಮ ಫ್ಲೆಕ್ಸ್ಗಳ ವಿರುದ್ಧ ಬಿಬಿಎಂಪಿ 26 ಎಫ್ಐಆರ್ಗಳನ್ನು ದಾಖಲಿಸಿದ್ದರೂ, ರಾಜಕಾರಣಿಗಳು ಬಿಬಿಎಂಪಿ ನಿಯಮಗಳು ಮತ್ತು ಹೈಕೋರ್ಟ್ ನಿರ್ದೇಶನ ಎರಡನ್ನೂ ನಿರ್ಲಕ್ಷಿಸುತ್ತಿದ್ದಾರೆ. ಇದೀಗ ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು, ಬೆಂಗಳೂರು ಪೂರ್ವ ವಲಯದ ಸಂಬಂಧಪಟ್ಟ ಅಧಿಕಾರಿಗೆ ಫ್ಲೆಕ್ಸ್ಗಳನ್ನು ತೆಗೆದುಹಾಕುವಂತೆ ಸೂಚಿಸುತ್ತೇನೆ ಎಂದು ಬಿಬಿಎಂಪಿ ಕಂದಾಯ ಇಲಾಖೆಯ ವಿಶೇಷ ಆಯುಕ್ತ ಆರ್.ಎಲ್.ದೀಪಕ್ ಹೇಳಿದ್ದಾರೆ.
Advertisement