ವಾಟ್ಸಾಪ್ ಚುನಾವಣಾ ಜಾಹೀರಾತುಗಳ ಮೇಲೆ ನಿಗಾ ಇಡುವುದು ಕಷ್ಟ: ಬಿಬಿಎಂಪಿ

ವಾಟ್ಸಾಪ್ ಆಧಾರಿತ ರಾಜಕೀಯ ಜಾಹೀರಾತುಗಳನ್ನು ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಬಿಬಿಎಂಪಿ ಚುನಾವಣಾ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಾಟ್ಸಾಪ್ ಆಧಾರಿತ ರಾಜಕೀಯ ಜಾಹೀರಾತುಗಳನ್ನು ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಬಿಬಿಎಂಪಿ ಚುನಾವಣಾ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಅವರು ಹೇಳಿದ್ದಾರೆ.

ವಿದ್ಯುನ್ಮಾನ, ಮುದ್ರಣ, ಸಾಮಾಜಿಕ ಜಾಲತಾಣಗಳು, ಎಸ್ಎಂಎಸ್ ಮೂಲಕ ಜಾಹೀರಾತುಗಳ ನಿಯಮಾವಳಿಗಳ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಾಹೀರಾತುಗಳಲ್ಲಿ ವೈಯಕ್ತಿಕ ನಿಂದನೆ ಮತ್ತು ಜಾತಿ ಮತ್ತು ಧರ್ಮದ ಉಲ್ಲೇಖ ಇರಬಾರದು ಎಂದು ಹೇಳಿದ್ದಾರೆ.

ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾದ ನಂತರ ಈ ಜಾಹೀರಾತುಗಳ ವೆಚ್ಚವನ್ನು ಅಭ್ಯರ್ಥಿಗಳ ಖಾತೆಗೆ ಸೇರಿಸಲಾಗುವುದು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ವಿಧಾನಸಭಾ ಚುನಾವಣಾ ಮಾಹಿತಿ ಪ್ರಕಟಿಸುವಾಗ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕು ಹಾಗೂ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.

ವಾಟ್ಸಾಪ್ ಆಧಾರಿತ ರಾಜಕೀಯ ಜಾಹೀರಾತುಗಳನ್ನು ನಿಭಾಯಿಸುವುದು ಇತ್ತೀಚೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಸಿವಿಜಿಲ್ ಆ್ಯಪ್‌ನಲ್ಲಿ ದೂರು ನೀಡಿದರೆ ಮಾತ್ರ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ದೂರುಗಳನ್ನು ಬಂದರೂ ವಾಟ್ಸಾಪ್ ಅಡ್ಮಿನ್‌ಗಳ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಾಟ್ಸಾಪ್ ಚುನಾವಣಾ ಜಾಹೀರಾತುಗಳ ಮೇಲೆ ನಿಗಾ ಇಡುವುದು ಕಷ್ಟ. ಇವುಗಳ ಮೇಲೆ ನಿಗಾ ಇರಿಸಿದ್ದೇ ಅದರೆ, ಅದು ಕಲಿಕೆಯ ಅನುಭವವಾಗಿರುತ್ತದೆ. ವಿದ್ಯುನ್ಮಾನ ಮತ್ತು ಇತರ ಮಾಧ್ಯಮ ವೇದಿಕೆಗಳಲ್ಲಿ ಜಾಹೀರಾತಿಗಾಗಿ ಅಭ್ಯರ್ಥಿಗಳು ಜಿಲ್ಲಾ ಚುನಾವಣಾ ಅಧಿಕಾರಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಪ್ರಮಾಣೀಕರಣ ಮತ್ತು ಮಾನಿಟರಿಂಗ್ ಸಮಿತಿಯನ್ನು ಸಂಪರ್ಕಿಸಬೇಕು. ಆದರೆ ಮುದ್ರಣಕ್ಕೆ ಅಂತಹ ಯಾವುದೇ ಪ್ರಮಾಣೀಕರಣ ಅಗತ್ಯವಿರುವುದಿಲ್ಲ ಎಂದು ಹೇಳಿದರು.

ಸುದ್ದಿ ಪತ್ರಿಕೆಗಳಲ್ಲಿ ಪಾವತಿ ಸುದ್ದಿಗಳು ಕಂಡು ಬಂದಿದ್ದೇ ಆದರೆ, ಅಭ್ಯರ್ಥಿಗೆ ಚುನಾವಣಾಧಿಕಾರಿಯಿಂದ ನೋಟಿಸ್ ನೀಡಲಾಗುತ್ತದೆ. ಬಳಿಕ ಸಮಿತಿಯು ಅದನ್ನು ಪರಿಶೀಲಿಸುತ್ತದೆ ಮತ್ತು ಅಸತ್ಯಗಳಿದ್ದರೆ, ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮಾಹಿತಿ ನೀಡಲಾಗುತ್ತದೆ. ನಂತರ ಮುಂದಿನ ಕ್ರಮಗಳ ಕುರಿತು ಅವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಪತ್ರ ಬರೆಯುತ್ತಾರೆಂದು ಮಾಹಿತಿ ನೀಡಿದರು.

ನ್ಯಾಯಯುತ ಮತದಾನವನ್ನು ಖಚಿತಪಡಿಸಿಕೊಳ್ಳಲು ಆನ್‌ಲೈನ್ ನಗದು ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಪ್ರಕರಣ ದಾಖಲಾದರೆ ತನಿಖೆ ನಡೆಸಲಾಗುವುದು. 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರ ಎರಡು ಲಕ್ಷಕ್ಕೂ ಅಧಿಕ ಮತದಾರರಿಗೆ ಅವರ ಮನೆ ಬಾಗಿಲಿಗೆ ಮತಪತ್ರ ನೀಡಲಾಗುವುದು. ಈ ಕುರಿತು ಏಪ್ರಿಲ್ 15 ರ ನಂತರ ವಿವರಗಳನ್ನು ನೀಡಲಾಗುತ್ತದೆ. ಚುನಾವಣಾ ಆಯೋಗವು 200 ಅಧಿಕ ಥೀಮ್ ಬೂತ್‌ಗಳನ್ನು ಹೊಂದಿದ್ದು,  ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ಮತದಾನ ಮಾಡಲು ಐದು ಪಿಂಕ್ ಬೂತ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದು ಚುನಾವಣಾ ಸಿದ್ಧತೆಗಳ ಕುರಿತು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com