ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ: ಡಿಕೆ ಶಿವಕುಮಾರ್

ಕರ್ನಾಟಕದಲ್ಲಿ ಗುತ್ತಿಗೆದಾರರು ಮತ್ತು ಕಾಂಗ್ರೆಸ್ ಸರ್ಕಾರದ ನಡುವಿನ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದು ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ನಡೆಸುತ್ತಿರುವ ಅಪಪ್ರಚಾರ ಎಂದು ಶನಿವಾರ ಹೇಳಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಗುತ್ತಿಗೆದಾರರು ಮತ್ತು ಕಾಂಗ್ರೆಸ್ ಸರ್ಕಾರದ ನಡುವಿನ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇದು ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ನಡೆಸುತ್ತಿರುವ ಅಪಪ್ರಚಾರ ಎಂದು ಶನಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಯಾವುದೇ ಸಚಿವರು ಕಮಿಷನ್ ಕೇಳಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮತ್ತಿತರರು ಸ್ಪಷ್ಟಪಡಿಸಿದ್ದಾರೆ ಎಂದರು.

'ನಾನು 33 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ನನ್ನ ಜವಾಬ್ದಾರಿಗಳು ನನಗೆ ಗೊತ್ತು. ಬಿಜೆಪಿ ನಾಯಕರು ಹಲವು ಹಗರಣಗಳನ್ನು ಮಾಡಿದ್ದು, ಅದನ್ನು ಸಾಬೀತು ಪಡಿಸುತ್ತೇನೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಏನೆಂದರೆ, ಅವರು (ಬಿಜೆಪಿ) ಸರ್ಕಾರ ನಡೆಸುವಾಗ ನಾವು ನಿದ್ದೆ ಮಾಡುತ್ತಿದ್ದೆವು ಎಂದು ಭಾವಿಸಿದ್ದರು. ಆದರೆ, ಏನಾಯಿತು ಎಂದು ನಮಗೆ ಚೆನ್ನಾಗಿ ತಿಳಿದಿದೆ. ಅವರು ಸ್ಮಾರ್ಟ್ ಆಗಿ ವರ್ತಿಸಲು ಪ್ರಯತ್ನಿಸುತ್ತಿದ್ದರೆ, ಏನು ಮಾಡಬೇಕೆಂದು ನಮಗೂ ತಿಳಿದಿದೆ' ಎಂದು ಹೇಳಿದರು.

'ಬಿಜೆಪಿಯವರು ಬಿಲ್‌ಗಳನ್ನು ಕ್ಲಿಯರ್ ಮಾಡಬೇಕಿತ್ತು. ಹಣ ಬಿಡುಗಡೆ ಮಾಡುವ ಎಲ್ಲಾ ಅಧಿಕಾರ ಅವರಿಗಿತ್ತು. ಆದರೆ, ಯಾಕೆ ಮಾಡಲಿಲ್ಲ? ಒಂದೇ ಒಂದು ಕಾಮಗಾರಿಗೂ ನಾನು ಒಪ್ಪಿಗೆ ನೀಡಿಲ್ಲ. ಅಂದಮೇಲೆ ಕಿಕ್‌ಬ್ಯಾಕ್ ಕೇಳಲು ಹೇಗೆ ಸಾಧ್ಯ?' ಎಂದು ಪ್ರಶ್ನಿಸಿದರು.

'ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಕೆಲಸವನ್ನು ನಿಮ್ಮ ಮುಂದಿಡುತ್ತೇವೆ. ನಾವು ಕರ್ನಾಟಕದ ಜನರಿಗೆ ಉತ್ತಮ ಆಡಳಿತ ನೀಡಲು ಬದ್ಧರಾಗಿದ್ದೇವೆ ಮತ್ತು ಜನರಿಂದಲೇ ಚುನಾಯಿತರಾಗಿದ್ದೇವೆ. ಕರ್ನಾಟಕದಲ್ಲಿ ಉತ್ತಮ, ಪಾರದರ್ಶಕ ಆಡಳಿತ ನಡೆಸಬೇಕೆಂದು ನಾನು ಬಯಸುತ್ತೇನೆ' ಎಂದು ಶಿವಕುಮಾರ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನಗೆ ರಾಜಕೀಯದಲ್ಲಿ ದಾಖಲೆಯ ಅನುಭವವಿದೆ ಎಂದು ಅವರು ಹೇಳಿದರು.

‘ಕೆಂಪಣ್ಣ ಅವರು ನನ್ನನ್ನು ಭೇಟಿಯಾಗಿ ಬಿಜೆಪಿ ಸರ್ಕಾರದ ಕಾಲದ ಬಾಕಿ ಬಿಲ್‌ಗಳನ್ನು ತೆರವುಗೊಳಿಸುವಂತೆ ಕೇಳಿದ್ದರು. ಬಿಜೆಪಿ ಏಕೆ ಹಣ ಬಿಡುಗಡೆ ಮಾಡಲಿಲ್ಲ ಎಂದು ನಾನು ಕೇಳಿದ್ದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಾಮಗಾರಿಗಳ ಪರಿಶೀಲನೆಗೆ ಐಎಎಸ್‌ ಅಧಿಕಾರಿಗಳ ತಂಡ ರಚಿಸಿದ್ದೇನೆ. ಅವರು ಕಾಮಗಾರಿಗಳ ಬಗ್ಗೆ ತನಿಖೆ ನಡೆಸುತ್ತಾರೆ. ನಾವು ಯಾವುದೇ ಗುತ್ತಿಗೆದಾರ ಅಥವಾ ಬಿಲ್ಡರ್‌ಗಳಿಗೆ ಕಿರುಕುಳ ನೀಡಲು ಬಯಸುವುದಿಲ್ಲ ಮತ್ತು ನ್ಯಾಯಯುತವಾಗಿ ನಾವು ಅವರಿಗೆ ಸಹಾಯ ಮಾಡುತ್ತೇವೆ' ಎಂದು ತಿಳಿಸಿದರು.

ಬಿಜೆಪಿಯವರು ಇದನ್ನೇ ರಾಜಕೀಯ ವಿಷಯವನ್ನಾಗಿ ಮಾಡುತ್ತಿದ್ದಾರೆ. ಇದರ ಹಿಂದೆ ಬಿಜೆಪಿ ಮುಖಂಡರಾದ ಡಾ. ಸಿಎನ್ ಅಶ್ವತ್ಥ್ ನಾರಾಯಣ್, ಗೋಪಾಲಯ್ಯ ಮತ್ತು ಆರ್ ಅಶೋಕ ಇದ್ದಾರೆ. ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಐದು ಗ್ಯಾರಂಟಿಗಳನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಅಸೂಯೆ ಪಟ್ಟಿದ್ದಾರೆ. ಅಂತಹ ಯೋಜನೆಗಳನ್ನು ನಾವೇಕೆ ನೀಡಲು ಸಾಧ್ಯವಿಲ್ಲ ಎಂದು ಅವರ ಕಾರ್ಯಕರ್ತರು ಅವರನ್ನು ಪ್ರಶ್ನಿಸುತ್ತಿದ್ದಾರೆ ಎಂದು ದೂರಿದರು. 

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಲ್‌ಗಳನ್ನು ತೆರವುಗೊಳಿಸುವುದನ್ನು ನಿಲ್ಲಿಸಿದೆ ಎಂದು ಗುತ್ತಿಗೆದಾರರು ಆರೋಪಿಸಿದರು. ಆದರೆ, ಡಿಕೆ ಶಿವಕುಮಾರ್ ಗುತ್ತಿಗೆದಾರರಿಂದ 15 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಬಾಕಿ ಇರುವ ಬಿಲ್‌ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

ಶಿವಕುಮಾರ್ ಅವರ ಬಳಿ ಸದ್ಯ ಲಭ್ಯವಿರುವ ನಿಧಿ 650 ಕೋಟಿ ರೂ.ಗಳಾಗಿದ್ದು, ಬಾಕಿ ಬಿಲ್‌ಗಳು 25,000 ಕೋಟಿ ರೂ. ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com