ಬೆಂಗಳೂರು: ಕುಡಿದ ಮತ್ತಿನಲ್ಲಿ ವಾಯುಸೇನೆಯ ನಿಷೇಧಿತ ತಾಂತ್ರಿಕ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದ ವ್ಯಕ್ತಿಯೊಬ್ಬನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ
ಪಶ್ಚಿಮ ಬಂಗಾಳ ಮೂಲದ ರಾಜ್ ಕುಮಾರ್ (50) ಬಂಧಿತ ವ್ಯಕ್ತಿ. ಆ.18ರಂದು ಸಂಜೆ ವಾಯುಸೇನಾ ಪ್ರದೇಶದ ತಡೆಗೋಡೆ ಏರಿದ ವ್ಯಕ್ತಿ ನಿಷೇಧಿತ ಪ್ರದೇಶ ಪ್ರವೇಶಿಸಿದ್ದಾನೆ. ಅಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಆರೋಪಿಯನ್ನು ರಕ್ಷಣಾ ಸಿಬ್ಬಂದಿ ವಶಕ್ಕೆ ಪಡೆದು ಹೆಚ್ಎಎಲ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಬೇಕರಿಯಲ್ಲಿ ದಾಂಧಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಈ ವೇಳೆ ರಕ್ಷಣಾ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿ ರಾಜ್ ಕುಮಾರ್ ಕೂಲಿ ಕಾರ್ಮಿಕನಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳದಿಂದ ನಗರಕ್ಕೆ ಬಂದಿದ್ದ. ವಾಯುಸೇನಾ ಪ್ರದೇಶದ ತಡೆಗೋಡೆ ಹಿಂಭಾಗದ ಕಾರ್ಮಿಕರ ಶೆಟ್ ನಲ್ಲಿ ನೆಲೆಸಿದ್ದ. ಆ.18ರಂದು ಮದ್ಯ ಸೇವಿಸಿದ್ದ ಆರೋಪಿ, ಮದ್ಯದ ಅಮಲಿನಲ್ಲಿ ತಡೆಗೋಡೆ ಏರಿ ವಾಯುಸೇನೆಯ ನಿಷೇಧಿತ ಪ್ರದೇಶಕ್ಕೆ ಬಂದಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Advertisement