ಬೆಂಗಳೂರು: ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದು ಜನಸಾಮಾನ್ಯರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರಿನಲ್ಲಿಂದು ಆಟೋ ಚಲಾಯಿಸುವ ವೇಳೆ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಸಂಪಗಿರಾಮನಗರದಲ್ಲಿ ಈ ಘಟನೆ ನಡೆದಿದೆ. ತಿಮ್ಮೇಶ್ ಹೃದಯಾಘಾತದಿಂದ ಸಾವನ್ನಪ್ಪಿದ ದುರ್ದೈವಿ. ಸಂಪಂಗಿ ರಾಮನಗರದಲ್ಲಿ ಟೀ ಕುಡಿಯಲು ಆಟೋ ನಿಲ್ಲಿಸಿ ತೆರಳುತ್ತಿದ್ದ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆಯನ್ನು ಸಾವರಿಸಿಕೊಳ್ಳುತ್ತ ಆಟೋದಿಂದ ಕೆಳಗೆ ಇಳಿದ ಡ್ರೈವರ್ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಿಮ್ಮೇಶ್ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು.
ತಿಮ್ಮೇಶ್ ಕೆಳಗೆ ಬಿದ್ದ ತಕ್ಷಣ ಅಕ್ಕಪಕ್ಕದ ಅಂಗಡಿಯವರು ಅವರನ್ನು ರಕ್ಷಿಸಲು ಆಗಮಿಸಿದ್ದಾರೆ. ಎದೆಯನ್ನು ಉಜ್ಜಿದ್ದಾರೆ. ಪಿಟ್ಸ್ ಬಂದಿರಬಹುದು ಎಂದು ಭಾವಿಸಿ ಕಬ್ಬಿಣವನ್ನೂ ಕೈಗೆ ನೀಡಿದ್ದಾರೆ ಆದರೆ ಪ್ರಯೋಜನವಾಗಿಲ್ಲ. ತಿಮ್ಮೇಶ್ ಬಿದ್ದ ತಕ್ಷಣ ಅವರ ಜೀವ ಹೊರಟು ಹೋಗಿತ್ತು.
ಆಟೋ ಓಡಿಸಿಕೊಂಡು ಬರುವಾಗಲೇ ತಿಮ್ಮೇಶ್ಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆಯನ್ನು ಸಾವರಿಸಿಕೊಳ್ಳುತ್ತ ಆಟೋದಿಂದ ಕೆಳಗೆ ಇಳಿದು ಸ್ವಲ್ಪ ದೂರ ಹೋಗುತ್ತಿದ್ದಂತೆ ಸಾವನ್ನಪ್ಪಿದ್ದಾರೆ. ಸಂಪಂಗಿ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement