ಮದುವೆಗೆ ನಕಾರ: ಪ್ರೇಯಸಿ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ
ಬೆಂಗಳೂರು: ತನ್ನನ್ನು ವಿವಾಹವಾಗಲು ಪ್ರೀತಿಸಿದ ಯುವತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ಆಕೆಯ ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಕೆಂಗೇರಿಯಲ್ಲಿ ಬುಧವಾರ ನಡೆದಿದೆ.
ರಾಕೇಶ್ (27) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಬುಧವಾರ ಮಧ್ಯಾಹ್ನ ಯುವತಿಯ ಮನೆಗೆ ಹೋಗಿರುವ ರಾಕೇಶ್ ಜಗಳ ಮಾಡಿದ್ದಾನೆ. ಮಾತಿನ ಚಕಮಕಿ ವೇಳೆ ಆಕೆಯ ಮನೆಯಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಕೂಡಲೇ ಯುವನನ್ನು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್ಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಗುರುವಾರ ಮೃತಪಟ್ಟಿದ್ದಾನೆ.
ರಾಕೇಶ್ ಈ ಹಿಂದೆ ತನ್ನ ಪೋಷಕರಿಗೆ ವಿಚಾರ ತಿಳಿಸಿ, ಹುಡುಗಿ ಕೇಳುವಂತೆ ಯುವತಿಯ ಮನೆಗೆ ಕಳುಹಿಸಿದ್ದಾನೆ. ಆದರೆ, ಯುವತಿಯ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಇದಾದ ಬಳಿಕ ಯುವತಿ ರಾಕೇಶ್ ನಿಂದ ದೂರಾಗಲು ಪ್ರಾರಂಭಿಸಿದ್ದಳು. ಇದರಿಂದ ನೊಂದಿದ್ದ ರಾಕೇಶ್ ಬುಧವಾರ ಮಧ್ಯಾಹ್ನ ಆಕೆಯ ಮನೆಗೆ ಹೋಗಿದ್ದಾನೆ. ಈ ವೇಳೆ ಯುವತಿಯ ಮನೆಯವರು ಬೆದರಿಸಿ, ಹಲ್ಲೆ ನಡೆಸಿದ್ದಾರು ಎಂದು ತಿಳಿದುಬಂದಿದೆ. ಈ ಸಂಬಂಧ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ