ಬೆಂಗಳೂರು: ಸರ್ಕಾರಗಳ ಸತತ ನಿರ್ಲಕ್ಷ್ಯದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಕ್ಕೆ ಕಲಬುರಗಿ ಜಿಲ್ಲೆಯ ರೈತರೇ ಸಾಕ್ಷಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ರೈತರು ಕರ್ನಾಟಕ ರಾಜ್ಯ ಬೀಜ ನಿಗಮದ (ಕೆಎಸ್ಸಿಎಲ್) ಮೂಲಕ ಕೃಷಿ ಇಲಾಖೆಯು ಕಳಪೆ ಬೀಜಗಳನ್ನು ಪೂಕೈಕೆ ಮಾಡಿದ್ದರಿಂದ ಉಂಟಾದ ಉದ್ದು ಬೆಳೆ ನಷ್ಟಕ್ಕೆ ಪರಿಹಾರವನ್ನು ಪಡೆಯಲು ದಶಕಕ್ಕೂ ಹೆಚ್ಚು ಕಾಲ ಕಾಯ್ದಿದ್ದಾರೆ.
ಇದೀಗ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ (ಕೆಎಸ್ಸಿಡಿಆರ್ಸಿ) ಮಧ್ಯಪ್ರವೇಶದಿಂದ ಸುಮಾರು 50 ರೈತರು 2012ರ ಮೇ 30ರಂದು ಜಿಲ್ಲಾ ಗ್ರಾಹಕ ಆಯೋಗ ಘೋಷಿಸಿರುವಂತೆ ಪ್ರತಿ ಎಕರೆಗೆ 5,000 ರೂ.ಗಳ ಪರಿಹಾರವನ್ನು ಪಡೆಯುತ್ತಿದ್ದಾರೆ. ಈ ಮೂದಲು ಕೃಷಿ ಆಯುಕ್ತರು ರೈತರಿಗೆ ಎಕರೆಗೆ 1,500 ರೂ. ಘೋಷಿಸಿದ್ದರು.
'ರೈತರು ಭಾರತೀಯ ಸಮಾಜದ ಬೆನ್ನೆಲುಬು ಮತ್ತು ಕೃಷಿ ಅವರ ಮುಖ್ಯ ಉದ್ಯೋಗವಾಗಿರುವುದರಿಂದ ಜಿಲ್ಲಾ ಗ್ರಾಹಕ ಆಯೋಗದ ಆದೇಶವನ್ನು ನಾವು ಸಹ ಒಪ್ಪುತ್ತೇವೆ' ಎಂದು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತಿಳಿಸಿದೆ.
ಜಿಲ್ಲಾ ಗ್ರಾಹಕ ಆಯೋಗದ ಆದೇಶವನ್ನು ಪ್ರಶ್ನಿಸಿ 2012ರಲ್ಲಿ ಕೃಷಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ಕೆಎಸ್ಸಿಡಿಆರ್ಸಿ ನ್ಯಾಯಾಂಗ ಸದಸ್ಯ ರವಿಶಂಕರ್, ಸದಸ್ಯೆ ಸುನೀತಾ ಸಿ.ಬಾಗೇವಾಡಿ, 'ರೈತರು ದೇಶದ ಆರ್ಥಿಕತೆಗೆ ಕೆಲವು ಶೇಕಡಾವಾರು ಕೊಡುಗೆ ನೀಡುತ್ತಾರೆ. ರೈತರ ಸಮಸ್ಯೆ ಬಗೆಹರಿಸಿದರೆ ನಮ್ಮ ನಾಡು ಸುಭಿಕ್ಷವಾಗುತ್ತದೆ’ ಎಂದು ಹೇಳಿದರು.
ಕೃಷಿ ಆಯುಕ್ತರ ಬೇಡಿಕೆಯಂತೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಡೆಯಾಳ ಗ್ರಾಮದ ರೈತರಿಗೆ ಕೆಎಸ್ಸಿಎಲ್ 2010ರಲ್ಲಿ ಖಾರಿಫ್ ಹಂಗಾಮಿನಲ್ಲಿ ಶೇ 50ರಷ್ಟು ಸಬ್ಸಿಡಿಯೊಂದಿಗೆ ನಾಲ್ಕು ವಿವಿಧ ಕಂಪನಿಗಳಿಂದ ಉದ್ದನ್ನು ಖರೀದಿಸಿ ಪೂರೈಕೆ ಮಾಡಿತ್ತು.
ಉದ್ದಿನ ಗಿಡಗಳ ಸಾಮಾನ್ಯ ಎತ್ತರ ಸುಮಾರು 1-2 ಅಡಿ, ಆದರೆ ರೈತರ ಜಮೀನುಗಳಲ್ಲಿ ಬೆಳೆದ ಗಿಡಗಳ ಎತ್ತರ 3 ಅಡಿಗಿಂತ ಹೆಚ್ಚಿದ್ದು, ಹೂವಿನ ಕಾಳು ಇಲ್ಲದೇ ಬಹುತೇಕ ಬೆಳೆ ಬರಡಾಗಿದೆ.
ಇದರಿಂದ ಸಂಕಷ್ಟಕ್ಕೀಡಾದ ರೈತರು ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ, ಅವರು 2010ರ ಸೆಪ್ಟೆಂಬರ್ 21 ರಂದು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆಗ ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ ನಂತರ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ಕೃಷಿ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದರು.
Advertisement