ಬೆಂಗಳೂರಿನಲ್ಲಿ ಚರ್ಚ್ ಸ್ಫೋಟ ಪ್ರಕರಣ; ಅಪರಾಧಿಗೆ ಎರಡು ವಾರಗಳ ಕಾಲ ಪೆರೋಲ್ ನೀಡಿದ ಹೈಕೋರ್ಟ್

ಚರ್ಚ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಕಾಲ ಪೆರೋಲ್ ನೀಡಿದೆ.  2000ರ ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದ ಚರ್ಚ್ ಸ್ಫೋಟ ಪ್ರಕರಣದ ಅಪರಾಧಿಗಳಲ್ಲಿ ಮೊಹಮ್ಮದ್ ಅಖಿಲ್ ಒಬ್ಬಾತ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಚರ್ಚ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗೆ ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಕಾಲ ಪೆರೋಲ್ ನೀಡಿದೆ.  2000ರ ಜುಲೈನಲ್ಲಿ ಬೆಂಗಳೂರಿನಲ್ಲಿ ನಡೆದ ಚರ್ಚ್ ಸ್ಫೋಟ ಪ್ರಕರಣದ ಅಪರಾಧಿಗಳಲ್ಲಿ ಮೊಹಮ್ಮದ್ ಅಖಿಲ್ ಒಬ್ಬಾತ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ಗೋವಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಗಳಲ್ಲಿ ದೀನದರ್ ಅಂಜುಮನ್ ಪಂಗಡಕ್ಕೆ ಸೇರಿದ 24 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾದ 13 ಮಂದಿಯಲ್ಲಿ ಅಖಿಲ್ ಕೂಡ ಒಬ್ಬ.

ಅಖಿಲ್ ಪತ್ನಿ ಮುಬೀನ್ ಉನ್ನಿಸ್ಸಾ ಬೇಗಂ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ವಿಚಾರಣೆ ನಡೆಸಿದರು.

'ಅಪರಾಧಿಯು ಇಂದಿನವರೆಗೆ 23 ವರ್ಷಗಳ ಜೈಲುವಾಸವನ್ನು ಯಾವುದೇ ವಿನಾಯಿತಿ ಇಲ್ಲದೆ ಅನುಭವಿಸಿದ್ದಾರೆ ಮತ್ತು ಈ ಅವಧಿಯಲ್ಲಿ ಆತನಿಗೆ ಪೆರೋಲ್ ನೀಡಿಲ್ಲ. ಅಪರಾಧಿಯ ಪತ್ನಿಯು ತಾವು ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬದ ಇತರ ಸದಸ್ಯರು ಕೂಡ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸದ್ಯ ಕುಟುಂಬದಲ್ಲಿ ಆಕೆಯ ಗಂಡನ ಉಪಸ್ಥಿತಿಯು ತುಂಬಾ ಅವಶ್ಯಕವಾಗಿದೆ. ಹೀಗಾಗಿ, ತನ್ನ ಗಂಡನಿಗೆ ಪೆರೋಲ್‌ ನೀಡುವಂತೆ ಪತ್ನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು' ಎಂದು ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಅಪರಾಧಿಯ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ  2023ರ ಜುಲೈನಲ್ಲಿ ಪ್ರಕರಣದ ಇನ್ನೊಬ್ಬ ಅಪರಾಧಿಗೆ ಸಮನ್ವಯ ಪೀಠದಿಂದ ಪೆರೋಲ್ ನೀಡಿದೆ ಎಂದಿದ್ದಾರೆ.

1974ರ ಪ್ರಕರಣದಲ್ಲಿ ಸಮನ್ವಯ ಪೀಠದ ತೀರ್ಪನ್ನು ಆಧರಿಸಿ, ಅದೇ ರೀತಿಯ ಪ್ರಕರಣಗಳಿಗೆ ನ್ಯಾಯಾಲಯವು ಅದೇ ತತ್ವವನ್ನು ಅನ್ವಯಿಸಬೇಕು. ನಿರ್ದಿಷ್ಟ ಪ್ರಕರಣದಲ್ಲಿ ಒಬ್ಬ ದಾವೆಗಾರನಿಗೆ ನಿರ್ದಿಷ್ಟ ಪರಿಹಾರ ನೀಡಿದರೆ, ಅದೇ ರೀತಿಯ ಇತರ ಪ್ರಕರಣಗಳಲ್ಲಿಯೂ ದಾವೆದಾರರಿಗೆ ಅದೇ ಪರಿಹಾರವನ್ನು ನೀಡಬೇಕು ಎಂದಿದ್ದಾರೆ.

ಆದ್ದರಿಂದ ಹೈಕೋರ್ಟ್ ಅಪರಾಧಿ ಅಖಿಲ್‌ ಅವರನ್ನು ಡಿಸೆಂಬರ್ 7 ರಿಂದ ಡಿಸೆಂಬರ್ 20ರ ಸಂಜೆವರೆಗೆ ಎರಡು ವಾರಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅನುಮತಿ ನೀಡಿದೆ.

ಪೆರೋಲ್ ಬಳಿಕ ಅಪರಾಧಿ ಹಿಂತಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಪೆರೋಲ್ ಅವಧಿಯಲ್ಲಿ ಆತ ಯಾವುದೇ ಇತರ ಅಪರಾಧಗಳಲ್ಲಿ ತೊಡಗಿಕೊಳ್ಳದಂತೆ ನೋಡಿಕೊಳ್ಳಲು ಸಾಮಾನ್ಯವಾಗಿ ನಿಗದಿಪಡಿಸಿದಂತೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಲು ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.

ಮುಬೀನ್ ಉನ್ನಿಸ್ಸಾ ಬೇಗಂ ಅವರು ತಮ್ಮ ಪತಿಗೆ 90 ದಿನಗಳ ಪೆರೋಲ್ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು.

ಅರ್ಜಿದಾರರ ಪತ್ನಿ ಪೆರೋಲ್‌ನ ವಿಸ್ತರಣೆಯನ್ನು ಕೋರಬಹುದು. ಆದರೆ, ಅರ್ಜಿದಾರರ ಪತಿ ಅಥವಾ ಅಪರಾಧಿ ಪೆರೋಲ್‌ ವೇಳೆ ಹೊರಗಿರುವಾಗ ಅವರ ನಡವಳಿಕೆಯನ್ನು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಚರ್ಚ್ ಸ್ಫೋಟ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B, 121, 121A, 124A, 153A, 426, 437 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಮತ್ತು 5 ಮತ್ತು ಸ್ಫೋಟಕ ನಿಯಮಗಳ ನಿಯಮ 5 ಮತ್ತು 9B ಅಡಿಯಲ್ಲಿ ಅಖಿಲ್ ಅಪರಾಧಿ ಎಂದು ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com