ಬೆಂಗಳೂರು: ದಂಪತಿ ಕಾರಿಗೆ ಡಿಕ್ಕಿ ಹೊಡೆದು ಐದು ಕಿಲೋಮೀಟರ್ವರೆಗೆ ಅವರನ್ನು ಬೆನ್ನಟ್ಟಿದ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಈ ವೇಳೆ 'ಅನುಕರಣೀಯ ಧೈರ್ಯ'ವನ್ನು ತೋರಿಸಿದ್ದಕ್ಕಾಗಿ ದಂಪತಿಗಳನ್ನು ಶ್ಲಾಘಿಸುವ ಸಂದೇಶಗಳು ಎಲ್ಲೆಡೆಯಿಂದ ಹರಿದುಬರುತ್ತಿವೆ.
ದಂಪತಿ ತೋರಿದ ಧೈರ್ಯಕ್ಕಾಗಿ ನಾವು ಅವರಿಗೆ ನಮಸ್ಕರಿಸುತ್ತೇವೆ ಎಂದು ಪೂರ್ವ ಬೆಂಗಳೂರು ಸಂಘಟನೆಯಾದ ಸಿಟಿಜನ್ಸ್ ಮೂವ್ಮೆಂಟ್ ಟ್ವೀಟ್ ಮಾಡಿದೆ.
ಬಂಧಿತ ಯುವಕರನ್ನು ವೃತ್ತಿಯಲ್ಲಿ ಮೀನು ಮಾರಾಟ ಮಾಡುವ 24 ವರ್ಷದ ಧನುಷ್ ಮತ್ತು ಆತನ ಬಳಿ ಕೆಲಸ ಮಾಡುತ್ತಿದ್ದ 20 ವರ್ಷದ ರಕ್ಷಿತ್ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 384 (ಸುಲಿಗೆ), 504 (ಶಾಂತಿ ಕದಡುವ ಉದ್ದೇಶಪೂರ್ವಕ ಅವಮಾನ) ಮತ್ತು 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಂಪತಿಯಿದ್ದ ಕಾರನ್ನು ಐದು ಕಿಲೋಮೀಟರ್ಗಳಷ್ಟು ಬೆನ್ನಟ್ಟಿದ ನಂತರ ಗೂಂಡಾಗಳು ಕಾರಿನ ಮೇಲೆ ಹಾರಿದ ಅದೇ ಘಟನೆಯ ಮತ್ತೊಂದು ಭಯಾನಕ ವಿಡಿಯೋ ನಮಗೆ ಲಭ್ಯವಾಗಿದೆ. ನೀವು ಅಂತಹ ಯಾವುದೇ ಸವಾಲನ್ನು ಎದುರಿಸಿದರೆ, ನಮ್ಮನ್ನು ಸಂಪರ್ಕಿಸಿ. ನಾವು ನಿಮಗಾಗಿ ಇದ್ದೇವೆ ಎಂದು ಸಂಸ್ಥೆಯ ಮತ್ತೊಂದು ಟ್ವೀಟ್ ಮಾಡಿದೆ.
ಟೆಕ್ಕಿ ದಂಪತಿಗಳಾದ ಅಂಕಿತಾ ಮತ್ತು ಕುಶ್ ಜೈಸ್ವಾಲ್ ಅವರು ಮನೆಗೆ ಮರಳುತ್ತಿದ್ದಾಗ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.
ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೂರ್ವ ವಿಭಾಗದ ಹೆಚ್ಚುವರಿ ಕಮಿಷನರ್, ವೈಟ್ಫೀಲ್ಡ್ ಡಿಸಿಪಿ ಮತ್ತು ಬೆಳ್ಳಂದೂರು ಪೊಲೀಸರಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನಿರ್ದೇಶನ ನೀಡಿದ್ದಾರೆ.
ಈಸ್ಟ್ ಬೆಂಗಳೂರಿನ ಸಿಟಿಜನ್ಸ್ ಮೂವ್ ಮೆಂಟ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಒಂದು ವಿಡಿಯೋದಲ್ಲಿ ಬೈಕ್ನಲ್ಲಿ ಬಂದ ಆರೋಪಿಗಳು ಕಾರಿಗೆ ಡಿಕ್ಕಿ ಹೊಡೆದು ದಂಪತಿಯನ್ನು ಇಳಿಯುವಂತೆ ಹೇಳುತ್ತಿದ್ದಾರೆ. ದಂಪತಿ ನಿರಾಕರಿಸಿ ಚಲಿಸಲು ಪ್ರಾರಂಭಿಸಿದಾಗ, ದುಷ್ಕರ್ಮಿಗಳು ತಮ್ಮ ಸೊಸೈಟಿ ತಲುಪುವವರೆಗೆ ಸುಮಾರು ಐದು ಕಿಲೋಮೀಟರ್ ಕಾರನ್ನು ಹಿಂಬಾಲಿಸಿದ್ದಾರೆ.
ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿ ಬಂಧಿಸಿದ್ದಾರೆ.
ಸಿಟಿಜನ್ಸ್ ಮೂವ್ಮೆಂಟ್, ಈಸ್ಟ್ ಬೆಂಗಳೂರು, ಈ ವಿಡಿಯೋವನ್ನು ಪೋಸ್ಟ್ ಮಾಡಿ ಜನರು ರಾತ್ರಿಯಲ್ಲಿ ಪ್ರಯಾಣಿಸುವಾಗ ಕಾರಿನ ಬಾಗಿಲು ತೆರೆಯದಂತೆ ಮತ್ತು ಡ್ಯಾಶ್ ಕ್ಯಾಮೆರಾವನ್ನು ಬಳಸಲು ಜನರಿಗೆ ಸಲಹೆ ನೀಡಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ.
Advertisement