ಕೋರ್ಟ್ ಆದೇಶ ಬಂದ ಬಳಿಕವಷ್ಚೇ 13 ಸಾವಿರ ಪದವೀಧರ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

ಕೋರ್ಟ್ ಆದೇಶ ಬಂದ ಕೂಡಲೇ 13 ಸಾವಿರ ಪದವೀಧರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಕೋರ್ಟ್ ಆದೇಶ ಬಂದ ಕೂಡಲೇ 13 ಸಾವಿರ ಪದವೀಧರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ವಿಧಾನಸಭೆ ಕಲಾಪದಲ್ಲಿ ಇಂದು ಗುರುವಾರ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕರಾದ ಬಿ.ವೈ. ವಿಜಯೇಂದ್ರ ಮತ್ತು ಮಹೇಶ್ ಟೆಂಗಿನಕಾಯಿ ಅವರು ವಿಷಯ ಪ್ರಸ್ತಾಪಿಸಿ, ಹಿಂದಿನ ಸರ್ಕಾರದ ಅವಯಲ್ಲಿ ಪ್ರಾಥಮಿಕ ಶಾಲೆಗಳಿಗೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ 13,052 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಆದರೆ, ಈವರೆಗೂ ನೇಮಕಾತಿ ಆದೇಶ ನೀಡಿಲ್ಲ. ಈ ಅಭ್ಯರ್ಥಿಗಳು ಬೆಂಗಳೂರಿನಲ್ಲಿ 2 ರಿಂದ 3 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಕನಿಷ್ಠ ಪಕ್ಷ ಅವರನ್ನು ಅಲ್ಲಿಗೆ ಹೋಗಿ ಸಚಿವರು ಭೇಟಿ ಮಾಡಿಲ್ಲ'' ಎಂದು ಆಕ್ಷೇಪಿಸಿದರು.

ಅಲ್ಲದೆ ''ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿರುವ ಷರತ್ತಿಗೊಳಪಟ್ಟು ನೇಮಕಾತಿ ಆದೇಶ ನೀಡಲಾಗಿದೆ. ಶಿಕ್ಷಕರ ನೇಮಕಾತಿ ವಿಷಯದಲ್ಲಿ ಅದೇ ಕ್ರಮವನ್ನು ಅನುಸರಿಸಬೇಕು'' ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, 'ಪ್ರಾಥಮಿಕ ಶಾಲೆಗಳಿಗೆ 13 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿದ್ದು, ನ್ಯಾಯಾಲಯದ ಆದೇಶ ಬರುತ್ತಿದ್ದಂತೆ ನೇಮಕಾತಿ ಪತ್ರಗಳನ್ನು ನೀಡಲಾಗುವುದು'' ಎಂದು ಹೇಳಿದರು.

ಜು.17ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ
''ಪ್ರತಿಭಟನೆ ನಡೆಸುತ್ತಿರುವವರ ಜೊತೆ ತಾವು ಸಮಾಲೋಚನೆ ನಡೆಸಿದ್ದು, ಈ ವಿಚಾರವಾಗಿ ರಾಜ್ಯದ ಅಡ್ವೊಕೇಟ್ ಜನರಲ್ ಜೊತೆ 4 ಸಭೆಗಳನ್ನು ನಡೆಸಲಾಗಿದೆ. ಇಲ್ಲಿ ಸಣ್ಣ ಕಾನೂನಿನ ತೊಡಕಿದೆ. ಅಭ್ಯರ್ಥಿಗಳು ಭಯ ಪಡುವ ಅಗತ್ಯವಿಲ್ಲ. ಈ ತಿಂಗಳ 17ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಆ ವೇಳೆ ಸರಿಯಾದ ವಾದ ಮಂಡಿಸಿ ನೇಮಕಾತಿ ಆದೇಶ ನೀಡಲು ಅನುಮತಿ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುವುದು. ಕೇವಲ ಒಂದೇ ಒಂದು ಪ್ರಕರಣ ಬಾಕಿ ಇದ್ದು, ಅಭ್ಯರ್ಥಿಯ ಆದಾಯವನ್ನು ತಂದೆಯ ಅಥವಾ ಪತಿಯ ಆದಾಯದ ಮೂಲದಿಂದ ಪರಿಗಣಿಸಬೇಕೇ ಎಂಬ ಚರ್ಚೆ ನಡೆಯುತ್ತಿದೆ. ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಈ ನೇಮಕಾತಿ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳ್ಳುವ ಅವಶ್ಯಕತೆ ತಮ್ಮ ಇಲಾಖೆಗೂ ಇದೆ. ಶಿಕ್ಷಕರ ಕೊರತೆ ವ್ಯಾಪಕವಾಗಿದೆ. ನ್ಯಾಯಾಲಯದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸದೇ ಮುಂದುವರೆಸಬೇಕು ಎಂದು ಸೂಚಿಸಿದೆ. ಆದರೆ, ನೇಮಕಾತಿ ಆದೇಶ ನೀಡದಂತೆ ಸ್ಪಷ್ಟಪಡಿಸಿದೆ'' ಎಂದು ಹೇಳಿದರು.

ದೈವಾರಾಧನೆ ಪ್ರದರ್ಶನ ಬಗ್ಗೆ ಪರಿಶೀಲನೆ: 
ಬಿಜೆಪಿ ಸದಸ್ಯ ಸುನಿಲ್ ಕುಮಾರ್ ಅವರ ಮತ್ತೊಂದು ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಕರಾವಳಿಯ 4 ಜಿಲ್ಲೆಗಳಲ್ಲಿ ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಕಲೆಗಳ ಜೊತೆ ದೈವಾರಾಧನೆಯನ್ನೂ ಪ್ರದರ್ಶನ ಮಾಡುವಂತೆ ನೀಡಿರುವ ಸೂಚನೆಯನ್ನು ಪುನರ್ ಪರಿಶೀಲಿಸುವುದಾಗಿ ಭರವಸೆ ನೀಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com