ಬೆಂಗಳೂರು: ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಆರೋಪಿ ಬಂಧನ; 22 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ
ಬೆಂಗಳೂರು: ಚಿಕ್ಕಂದಿನಿಂದಲೂ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡು ಚಿನ್ನ ಕದಿಯುವ ಕಾಯಕದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಫೀಕ್ 10 ವರ್ಷದಿಂದ ನಿತ್ಯ ಕಳ್ಳತನದಲ್ಲಿ ತೊಡಗಿದ್ದು, ಐಷಾರಾಮಿ ಜೀವನ ನಡೆಸಲು ಹಣ ಸಂಪಾದಿಸಲು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತುಮಕೂರು ಮೂಲದ ರಫೀಕ್ (29) ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ 20 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಜೂನ್ನಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ ಆತನನ್ನು ಮತ್ತೆ ಬಂಧಿಸಲಾಗಿದೆ. ರಫೀಕ್ನಿಂದ 22 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಂಗಡಿ ಮುರಿದು 50 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ ಎಂದು ಜೂನ್ 18ರಂದು ಪ್ರಕಾಶನಗರದ ಪ್ರಾವಿಷನ್ ಸ್ಟೋರ್ನ ಮಾಲೀಕರು ರಾಜಾಜಿನಗರ ಪೊಲೀಸರಿಗೆ ದೂರು ನೀಡಿದ್ದರು. ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರಫೀಕ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಟೊಮೆಟೊ ದರೋಡೆ: ದಂಪತಿ ಬಂಧನ, ಮೂರನೇ ಆರೋಪಿಗಾಗಿ ಶೋಧ
ಬೆಂಗಳೂರಿನ ಗಿರಿನಗರ, ಕಬ್ಬನ್ ಪಾರ್ಕ್, ಕೆಆರ್ ಪುರಂ, ಚಂದ್ರಾ ಲೇಔಟ್, ಅಮೃತಹಳ್ಳಿ, ಬನಶಂಕರಿ ಹಾಗೂ ತಿಪಟೂರು, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ ಸೇರಿದಂತೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 20 ಕಳ್ಳತನ ಪ್ರಕರಣಗಳಲ್ಲಿ ರಫೀಕ್ ಭಾಗಿಯಾಗಿರುವುದು ವಿಸ್ತೃತ ತನಿಖೆಯಿಂದ ತಿಳಿದುಬಂದಿದೆ.
ರಫೀಕ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಪ್ರಕಾಶನಗರದ ಪ್ರಾವಿಷನ್ ಸ್ಟೋರ್ಗೆ ಕನ್ನ ಹಾಕಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಗ ಹಾಕಿರುವ ಮನೆಗಳು ಮತ್ತು ಅಂಗಡಿಗಳನ್ನು ಗುರಿಯಾಗಿಟ್ಟುಕೊಂಡು ರಫೀಕ್ ಕಳ್ಳತನ ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ