ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಳೆ ಪರಿಸ್ಥಿತಿ ಎದುರಿಸಲು ಸಜ್ಜಾದ ಬಿಬಿಎಂಪಿ; 11,000 ಚೀಲ ಕೋಲ್ಡ್ ಮಿಕ್ಸ್‌ ರೆಡಿ!

ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆಗಳಿಂದಾಗಿ ಕಳೆದ ಬಾರಿ ಸಾರ್ವಜನಿಕರಿಂದ ಹಿಡಿಶಾಪ ಹಾಕಿಸಿಕೊಂಡು, ಹೈಕೋರ್ಟ್ ನಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಬಿಬಿಎಂಪಿ, ಇದರಿಂದ ಪಾಠ ಕಲಿತಿದ್ದು, ಈ ಬಾರಿ ಮಳೆ ಆರಂಭವಾಗುವುದಕ್ಕೂ ಮುನ್ನವೇ ಪರಿಸ್ಥಿತಿ ಎದುರಿಸಲು ಸಜ್ಜುಗೊಂಡಿದೆ.

ಬೆಂಗಳೂರು: ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆಗಳಿಂದಾಗಿ ಕಳೆದ ಬಾರಿ ಸಾರ್ವಜನಿಕರಿಂದ ಹಿಡಿಶಾಪ ಹಾಕಿಸಿಕೊಂಡು, ಹೈಕೋರ್ಟ್ ನಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಬಿಬಿಎಂಪಿ, ಇದರಿಂದ ಪಾಠ ಕಲಿತಿದ್ದು, ಈ ಬಾರಿ ಮಳೆ ಆರಂಭವಾಗುವುದಕ್ಕೂ ಮುನ್ನವೇ ಪರಿಸ್ಥಿತಿ ಎದುರಿಸಲು ಸಜ್ಜುಗೊಂಡಿದೆ.

ಮಳೆ ಪರಿಸ್ಥಿತಿಯಿಂದಾಗಿ ರಸ್ತೆಗಳು ಬಾಯ್ತೆರೆದರೆ ಅವುಗಳ ಮುಚ್ಚಲು ಬಿಬಿಎಂಪಿ 11,000 ಚೀಲಗಳ ಕೋಲ್ಡ್ ಮಿಕ್ಸ್ ಗಳನ್ನು ಸಂಗ್ರಹಿಸಿಟ್ಟುಕೊಂಡಿದೆ.

ಕೇವಲ 10 ನಿಮಿಷಗಳಲ್ಲಿ ಗುಂಡಿ ತುಂಬಲು ಕೋಲ್ಡ್ ಮಿಕ್ಸ್ ಸಿದ್ಧವಾಗಿದೆ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಟು ರಸ್ತೆಗಳು ಮೂಲಸೌಕರ್ಯ ವಲಯಗಳಾಗಿದ್ದು, ಪ್ರತಿ ವಲಯಕ್ಕೆ 500 ಚೀಲಗಳನ್ನು ನೀಡಲಾಗುತ್ತದೆ. ಮಳೆಗಾಲದಲ್ಲಿ ಪ್ರತಿ ವಾರ್ಡ್‌ಗೆ 50 ಚೀಲಗಳ ಕೋಲ್ಟ್ ಮಿಕ್ಸ್ ಗಳನ್ನು ರವಾನಿಸಲಾಗುತ್ತದೆ. ಇವುಗಳ ಮೂಲಕ ರಸ್ತೆಗುಂಡಿಗಳ ಮುಚ್ಚಿ, ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದು ಹೇಳಿದ್ದಾರೆ.

“ಪಾಲಿಕೆಯ ಸ್ಥಾವರದಲ್ಲಿ ಕೋಲ್ಡ್ ಮಿಕ್ಸ್ ಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಖಾಸಗಿಯವರ ಪಾಲಿಲ್ಲ. ಅಧಿಕಾರಿಗಳು ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಪ್ರತಿ ವಲಯದಿಂದ ಬೇಡಿಕೆ ಆಧರಿಸಿ ಮಿಶ್ರಣವನ್ನು ಸರಬರಾಜು ಮಾಡಲಾಗುತ್ತಿದೆ. ಕೋಲ್ಡ್ ಮಿಕ್ಸ್ ಬ್ಯಾಗ್ 10 ಕೆ.ಜಿ ತೂಕವನ್ನು ಹೊಂದಿರಲಿದೆ. ಕೋಲ್ಡ್ ಮಿಕ್ಸ್ ನಿಂದ ಕಡಿಮೆ ಸಮಯದಲ್ಲಿ ರಸ್ತೆಗುಂಡಿಗಳ ಮುಚ್ಚುವ ಕೆಲಸ ಮಾಡಲಾಗುತ್ತದೆ. ಗುಂಡಿ ಮುಚ್ಚುವ ಸಂದರ್ಭದಲ್ಲಿ ಸಂಚಾರವನ್ನು ನಿಲ್ಲಿಸುವ ಪರಿಸ್ಥಿತಿ ಕೂಡ ಎದುರಾಗುವುದಿಲ್ಲ ಎಂದು ರಸ್ತೆ ಮೂಲಸೌಕರ್ಯ ವಿಶೇಷ ಆಯುಕ್ತ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

ರಸ್ತೆ ಮೂಲಸೌಕರ್ಯ ತಜ್ಞ ಹಾಗೂ ಇಂಡಿಯಾ ಇಂಟರ್‌ನ್ಯಾಶನಲ್ ಇನ್‌ಫ್ರಾಸ್ಟ್ರಕ್ಚರ್‌ನ ಯೋಜನಾ ನಿರ್ದೇಶಕ ಪ್ರಸಾದ್ ಡಿ ಮಾತನಾಡಿ, ತಂತ್ರಜ್ಞಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಈ ತಂತ್ರಜ್ಞಾನದಲ್ಲಿ ಡಾಂಬರನ್ನು ಬಿಸಿ ಮಾಡುವ ಅಗತ್ಯವಿರುವುದಿಲ್ಲ. ಇತರೆ ವಿಧಾನಗಳಿಗೆ ಹೋಲಿಕೆ ಮಾಡಿದರೆ ಕೋಲ್ಡ್ ಮಿಕ್ಸ್ ಅತ್ಯುತ್ತಮವಾದದ್ದು. ರಸ್ತೆಗಳ ಬಾಳಿಕೆ ಕೂಡ ದೀರ್ಘವಾಗಿರುತ್ತದೆ. ಎಂಜಿನಿಯರ್‌ಗಳು ಗುಂಡಿಯ ಸುತ್ತಲೂ ಪೆಟ್ಟಿಗೆಯನ್ನು ಇರಿಸಿ, ದ್ರಾವಣವನ್ನು ಸೇರಿಸಿ, ತಣ್ಣನೆಯ ಮಿಶ್ರಣವನ್ನು ಸುರಿದರೆ ಕೆಲಸ ಮುಗಿಯುತ್ತದೆ ಎಂದು ಹೇಳಿದ್ದಾರೆ.

ಬಿಬಿಎಂಪಿಯ ಸಿದ್ಧತೆಗಳನ್ನು ಬೆಂಗಳೂರು ಸಂಚಾರಿ ಪೊಲೀಸರು (ಬಿಟಿಪಿ) ಸ್ವಾಗತಿಸಿದ್ದಾರೆ. "ಕೋಲ್ಡ್ ಮಿಕ್ಸ್ ಅಥವಾ ಇನ್ನಾವುದೇ ಉಪಕ್ರಮವು ಸುಗಮ ಸಂಚಾರಕ್ಕೆ ಸಹಾಯ ಮಾಡುತ್ತದೆ, ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸಿದರೆ, ಅದು ಸ್ವಾಗತಾರ್ಹವಾದದ್ದು ಎಂದು ಜಂಟಿ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com