ಬೆಂಗಳೂರು: ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಆವರಣದಲ್ಲಿ ಡ್ರಮ್ ನೊಳಗೆ ಅಪರಿಚಿತ ಮಹಿಳೆಯ ಶವ ಪತ್ತೆ!

ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ಮೂವತ್ತರ ಹರೆಯದ ಮಹಿಳೆಯ ಶವ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಆವರಣದಲ್ಲಿ ಸೋಮವಾರ ರಾತ್ರಿ ಡ್ರಮ್ ನೊಳಗೆ ಪತ್ತೆಯಾಗಿದೆ.
ಪ್ಲಾಸ್ಟಿಕ್ ಡ್ರಮ್ ನೊಳಗೆ ಮಹಿಳೆ ಶವ ಪತ್ತೆ
ಪ್ಲಾಸ್ಟಿಕ್ ಡ್ರಮ್ ನೊಳಗೆ ಮಹಿಳೆ ಶವ ಪತ್ತೆ
Updated on

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ಮೂವತ್ತರ ಹರೆಯದ ಮಹಿಳೆಯ ಶವ ಬೈಯಪ್ಪನಹಳ್ಳಿಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಆವರಣದಲ್ಲಿ ಸೋಮವಾರ ರಾತ್ರಿ ಡ್ರಮ್ ನೊಳಗೆ ಪತ್ತೆಯಾಗಿದೆ.

ಇದು ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಮೂರನೇ ಘೋರ ಅಪರಾಧವಾಗಿದ್ದು, ರೈಲು ನಿಲ್ದಾಣಗಳಲ್ಲಿ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸೋಮವಾರ ಮುಂಜಾನೆ (12.16 ಗಂಟೆ) ಆಟೋದಲ್ಲಿ ಮೂವರು ವ್ಯಕ್ತಿಗಳು ಬಂದಿದ್ದು, ಡ್ರಮ್ ಇಟ್ಟು ಪರಾರಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ರಾತ್ರಿ 7.30 ರ ಸುಮಾರಿಗೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರಿಗೆ ನಿಲ್ದಾಣದ ಮುಂಭಾಗದ ಸ್ವಯಂಚಾಲಿತ ಸ್ಲೈಡಿಂಗ್ ಡೋರ್‌ನ ಮುಂದೆ ಇರಿಸಲಾದ ನೀಲಿ ಡ್ರಮ್ ಬಗ್ಗೆ ಅನುಮಾನ ಉಂಟಾದಾಗ ಘಟನೆಯು ಬಯಲಾಗಿದೆ. ನಿನ್ನೆ ಮಧ್ಯಾಹ್ನ 2 ಗಂಟೆಯಲ್ಲಿ ಪೋಲೀಸರೊಬ್ಬರು ಡ್ರಮ್  ಗಮನಿಸಿದ್ದಾರೆ. ಅನೇಕ ದೂರದ ಪ್ರಯಾಣಿಕರು ರೈಲಿನಲ್ಲಿ ಅನೇಕ ವಸ್ತುಗಳನ್ನು ಸಾಗಿಸಲು ಇಂತಹ ಡ್ರಮ್‌ಗಳನ್ನು ಬಳಸುತ್ತಾರೆ ಮತ್ತು ಆದ್ದರಿಂದ ಇದು ಯಾರೊ ಪ್ರಯಾಣಿಕರ ಸಾಮಾನು ಎಂದು ಭಾವಿಸಲಾಗಿದೆ. ಆದರೆ, ರಾತ್ರಿ 7.30ರವರೆಗೆ ಅದೇ ಸ್ಥಳದಲ್ಲಿದ್ದಾಗ, ಅನುಮಾನ ಬಂದಿದ್ದು, ಆರ್‌ಪಿಎಫ್ ಡ್ರಮ್ ತೆರೆದಿದ್ದಾರೆ.  ದುರ್ವಾಸನೆಯಿಂದ ಅದು ಶವ ಎಂದು ತಿಳಿದು ಬಂದಿದ್ದು, ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ಮಾಹಿತಿ ನೀಡಿದ್ದಾರೆ. 

ಆರ್ ಪಿಎಫ್ ಮಾಹಿತಿ ನೀಡಿದ ನಂತರ ನಮ್ಮ ತಂಡ ಸ್ಥಳಕ್ಕೆ ಧಾವಿಸಿದಾಗ ಡ್ರಮ್ ನೊಳಗೆ ಬಟ್ಟೆಗಳ ನಡುವೆ ಶವವನ್ನು ಇಡಲಾಗಿತ್ತು. ಈ ಬಗ್ಗೆ ವಿಧಿ ವಿಜ್ಞಾನ ಮತ್ತು ಬೆರಳಚ್ಚು ತಂಡಗಳಿಗೆ ಮಾಹಿತಿ ನೀಡಿದ್ದೇವು. ಇದು 31 ರಿಂದ 35 ವರ್ಷ ವಯಸ್ಸಿನ ಮಹಿಳೆಯ ಸ್ಪಷ್ಟ ಕೊಲೆಯಂತೆ ಕಾಣುತ್ತದೆ. ಸಾಕ್ಷ್ಯ ನಾಶಪಡಿಸಲು ಮತ್ತು ದೇಹವನ್ನು ಸಾಗಿಸಲು ಪ್ರಯತ್ನಿಸಲಾಗಿದೆ. ಈ ಸಂಬಂಧ ಜಿಆರ್‌ಪಿ ಐಪಿಸಿಯ ಸೆಕ್ಷನ್ 301 (ವ್ಯಕ್ತಿಯ ಸಾವಿಗೆ ಕಾರಣವಾಗುವ ಅಪರಾಧಿ ನರಹತ್ಯೆ) ಸೇರಿದಂತೆ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು  ಜಿಆರ್ ಪಿ  ಎಸ್ ಪಿ ಎಸ್‌ಕೆ ಸೌಮ್ಯಲತಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಮೂರನೇ ಕೊಲೆ: ರೈಲ್ವೆ ಆವರಣದೊಳಗೆ ಮಹಿಳೆ ಕೊಲೆ ಮಾಡಿ, ಶವ ವಿಲೇವಾರಿ ಮಾಡಿದ ಪ್ರಕರಣಗಳಲ್ಲಿ ಇದು ಮೂರನೇ ಘಟನೆಯಾಗಿದೆ. ಹಿಂದಿನ ಎರಡು ಪ್ರಕರಣಗಳು ಇನ್ನೂ ಭೇದಿಸಲಾಗಿಲ್ಲ. ಈ ವರ್ಷದ ಜನವರಿ 4 ರಂದು ಯಶವಂತಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಒಂದರಲ್ಲಿ ಮನೆಗೆಲಸದ ಸಿಬ್ಬಂದಿ ಮಹಿಳೆಯ ಶವ ಪತ್ತೆಯಾಗಿತ್ತು, ಅದೇ ರೀತಿಯಲ್ಲಿ ಬಟ್ಟೆಯೊಳಗೆ ಪ್ಯಾಕ್ ಮಾಡಲಾಗಿತ್ತು. ಡಿಸೆಂಬರ್ 8 ರಂದು, ಬಂಗಾರಪೇಟೆ-ಎಸ್ ಎಂವಿಟಿ ಮೆಮೆ ವಿಶೇಷ ರೈಲಿನಲ್ಲಿ ( ಸಂಖ್ಯೆ 06527) ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. 

ಹಿಂದಿನ ಇಂತಹ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿದ ಜಿಆರ್ ಪಿ ಎಸ್ ಪಿ, ಆ ಪ್ರಕರಣಗಳನ್ನು ಬೇಧಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಯಾವುದೇ ಠಾಣೆಗಳಲ್ಲಿ ಅವರಿಗೆ ಸಂಬಂಧಿಸಿದ ನಾಪತ್ತೆ ದೂರು ಇಲ್ಲದಿರುವುದರಿಂದ ತುಂಬಾ ಕಷ್ಟವಾಯಿತು. ಮಾರ್ಗಮಧ್ಯೆ ಗ್ರಾಮಗಳಿಗೆ ತೆರಳಿ ಫೋಟೋಗಳನ್ನು ಹರಿಬಿಟ್ಟು ಅಲ್ಲಿನ ಜನರೊಂದಿಗೆ ಮಾತನಾಡಿದ್ದೇವೆ. ಆದರೆ ಅವು ಬಗೆಹರಿಯದೆ ಉಳಿದಿವೆ. ಸೋಮವಾರ ಪತ್ತೆಯಾದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com