ಬೈಕ್ ಸವಾರರಿಂದ ಟೆಕ್ಕಿ ಕಾರ್ ಚೇಸ್ ಪ್ರಕರಣಕ್ಕೆ ಟ್ವಿಸ್ಟ್: ಸವಾರರು ಕಾರನ್ನು ಹಿಂಬಾಲಿಸಿದ್ದೇಕೆ? ಪೊಲೀಸರು ಹೇಳಿದ್ದೇನು?

ಹಳೆ ಮದ್ರಾಸ್ ರಸ್ತೆಯ ಬಿಇಎಂಎಲ್ ಗೆ ಸುರಂಜನ್ ದಾಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಇಬ್ಬರು ಬೈಕ್‌ ಸವಾರರು ತನ್ನನ್ನು ಮತ್ತು ತನ್ನ ಕುಟುಂಬವನ್ನು ಹಿಂಬಾಲಿಸಿದ ಬಗ್ಗೆ ಟ್ವೀಟ್ ಮಾಡಿದ ಟೆಕ್ಕಿಯೇ ಇದೀಗ ತಪ್ಪಿತಸ್ಥನಾಗಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಹಳೆ ಮದ್ರಾಸ್ ರಸ್ತೆಯ ಬಿಇಎಂಎಲ್ ಗೆ ಸುರಂಜನ್ ದಾಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಇಬ್ಬರು ಬೈಕ್‌ ಸವಾರರು ತನ್ನನ್ನು ಮತ್ತು ತನ್ನ ಕುಟುಂಬವನ್ನು ಹಿಂಬಾಲಿಸಿದ ಬಗ್ಗೆ ಟ್ವೀಟ್ ಮಾಡಿದ ಟೆಕ್ಕಿಯೇ ಇದೀಗ ತಪ್ಪಿತಸ್ಥನಾಗಿದ್ದಾನೆ. 

ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಟೆಕ್ಕಿ ನೀಲೇಶ್ ಸಲಗಾಂವ್ಕರ್ ಎಂಬಾತ ತನ್ನ ಪತ್ನಿ ಹಾಗೂ 17 ವರ್ಷದ ಮಗಳೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ನಿಂತಿದ್ದ ನೀರಿನ ಮೇಲೆ ಕಾರು ಚಲಾಯಿಸಿದ್ದಾನೆ. ಇದರಿಂದ ಕಾರಿನ ಪಕ್ಕದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ನೀರು ಬಿದ್ದು ಬಟ್ಟೆ ಒದ್ದೆಯಾಗಿದೆ. ಇದರಿಂದ ಹತಾಶರಾದ ಬೈಕ್ ಸವಾರರು ಕಾರನ್ನು ನಿಲ್ಲಿಸುವಂತೆ ಹಿಂಬಾಲಿಸಿದ್ದಾರೆ. ಇದೆಲ್ಲವೂ ಸುತ್ತಮುತ್ತಲಿನ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. 

ಈ ಬಗ್ಗೆ ಟ್ವೀಟ್ ಮಾಡಿದ್ದ ಟೆಕ್ಕಿಯನ್ನು ದೂರು ನೀಡುವಂತೆ ಬೈಯಪ್ಪನಹಳ್ಳಿ ಪೊಲೀಸರ ಮನವೊಲಿಕೆ ಪ್ರಯತ್ನ ಫಲ ನೀಡಿಲ್ಲ. ಇತ್ತೀಚೆಗಷ್ಟೇ ನಗರ ಪೊಲೀಸ್ ಕಮಿಷನರ್ ಸಿ.ಎಚ್.ಪ್ರತಾಪ್ ರೆಡ್ಡಿ ಅವರು ಸಾರ್ವಜನಿಕರು ತಮಗೆ ತೊಂದರೆಯಾದರೆ ಸಾಮಾಜಿಕ ಜಾಲತಾಣಗಳಿಗೆ ತೆರಳುವ ಬದಲು ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.

'ರಸ್ತೆಯಲ್ಲಿ ನೀರು ನಿಂತಿರುವುದು ಟೆಕ್ಕಿಗೆ ತಿಳಿಯದಿರಬಹುದು. ಇನ್ನು ಕೋಪದಿಂದ ಬೈಕ್ ಸವಾರರು ಕಾರನ್ನು ಹಿಂಬಾಲಿಸಿಕೊಂಡು ಬಂದಿರಬೇಕು. ಬೈಕ್ ಸವಾರರು ಕಾರನ್ನು ಹಿಂಬಾಲಿಸುತ್ತಿರುವುದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇನ್ನು ಟೆಕ್ಕಿ ದೂರು ನೀಡದೆ ಬೈಕ್ ಸವಾರರ ಮೇಲೆ ಪೊಲೀಸರು ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಇನ್ನು ಮಂಗಳವಾರ ಬೆಳಗ್ಗೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಟೆಕ್ಕಿಗೆ ಕರೆ ಮಾಡಿ ದೂರು ದಾಖಲಿಸುವಂತೆ ಕೇಳಿಕೊಂಡಿದ್ದಾರೆ ಎಂದು ತನಿಖೆಯ ಭಾಗವಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಪ್ರಿಲ್ 29ರ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಧ್ಯಾಹ್ನ 1.30ರ ಸುಮಾರಿಗೆ ಹಗಲು ಹೊತ್ತಿನಲ್ಲಿ ಬೈಕ್‌ ಸವಾರರಿಬ್ಬರು ಕಾರಿನ ಗಾಜುಗಳಿಗೆ ಹೆಲ್ಮೆಟ್‌ನಿಂದ ಹೊಡೆದು ಹಿಂಬಾಲಿಸಿದ್ದಾರೆ ಎನ್ನಲಾಗಿದೆ. ಟೆಕ್ಕಿ ತನ್ನ ಕುಟುಂಬದೊಂದಿಗೆ ಎಚ್‌ಎಸ್‌ಆರ್ ಲೇಔಟ್‌ನಿಂದ ಪ್ರಯಾಣಿಸುತ್ತಿದ್ದರು.

ಬೈಕ್ ಸವಾರರಲ್ಲಿ ಒಬ್ಬ ನನ್ನ ಬದಿಗೆ ಬಂದಿದ್ದು ಮತ್ತೊಬ್ಬ ಕಾರಿನ ಹುಡ್ ಮೇಲೆ ಕೈ ಹಾಕಿದನು. ನಾವು ಅಪಾಯದಲ್ಲಿದ್ದೇವೆ. ನಮಗೆ ಏನಾದರೂ ಅಹಿತಕರ ಘಟನೆಗಳು ಸಂಭವಿಸಬಹುದು ಎಂದು ಗ್ರಹಿಸಿದ ನಾನು ಕಾರನ್ನು ಹಿಮ್ಮುಖವಾಗಿ ಚಲಿಸಿ ಎಡಕ್ಕೆ ತಿರುಗಿ ಇಬ್ಬರನ್ನೂ ತಪ್ಪಿಸಿ ವೇಗವಾಗಿ ಓಡಿದೆ ಎಂದು ಟೆಕ್ಕಿ ಟ್ವೀಟ್ ಮಾಡಿದ್ದರು.

ಇದೇ ವೇಳೆ ಆತಂಕದಲ್ಲಿದ್ದ ನನ್ನ ಪತ್ನಿ 100 ಡಯಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಬಿಇಎಂಎಲ್ ವೃತ್ತಕ್ಕೆ ತಲುಪಿ ಸಂಚಾರಿ ಪೊಲೀಸರಿಗೆ ಇಡೀ ಘಟನೆಯನ್ನು ವಿವರಿಸಿದೆ. ಆದರೆ ಅವರು ಜೀವನ್ ಭೀಮಾ ನಗರ ಠಾಣೆಗೆ ತೆರಳುವಂತೆ ಸೂಚಿಸಿದರು. ವ್ಯಾಪ್ತಿಯ ಸಮಸ್ಯೆಗಳಿಂದಾಗಿ, ಪೊಲೀಸರು ನಮ್ಮನ್ನು ಬೇರೆ ಠಾಣೆಗೆ ಹೋಗುವಂತೆ ಹೇಳಿದರು. ನಮ್ಮಲ್ಲಿ ಯಾವುದೇ ಶಕ್ತಿ ಉಳಿದಿಲ್ಲದ ಕಾರಣ ಮತ್ತೊಂದು ಪೊಲೀಸ್ ಠಾಣೆಗೆ ಹೋಗುವ ಮಾನಸಿಕ ಸ್ಥಿತಿಯಲ್ಲಿ ನಾವು ಇರಲಿಲ್ಲ ಎಂದು ಟೆಕ್ಕಿ ಟ್ವೀಟ್ ಮಾಡಿದ್ದರು.

ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದ ನಗರ ಪೊಲೀಸರು ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕಾಗಿ @byappanahallips ಗೆ ರವಾನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com