ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಹಣಹಾಸು ಸಂಬಂಧಿತ ದಾಖಲೆಗಳಿಗೆ ಪ್ರಮುಖವಾಗಿರುವ 1 ರೂ. ರೆವಿನ್ಯೂ ಸ್ಟ್ಯಾಂಪ್ ನ ತೀವ್ರ ಕೊರತೆ ಎದುರಾಗಿದೆ.ಸಾರ್ವಜನಿಕರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದ್ದು, ರಾಜ್ಯ ಅಂಚೆ ವೃತ್ತವು ಈಗ ಲಭ್ಯವಿರುವ ದಾಸ್ತಾನುಗಳನ್ನು ಜಿಲ್ಲೆಗಳಾದ್ಯಂತ ಮರುಹಂಚಿಕೆ ಮಾಡುತ್ತಿದೆ.
ಕಂದಾಯ ಅಂಚೆ ಚೀಟಿಗಳನ್ನು ರಾಜ್ಯ ಸರ್ಕಾರದ ಖಜಾನೆ ಇಲಾಖೆ ಒದಗಿಸುತ್ತದೆ. ಕರ್ನಾಟಕದಾದ್ಯಂತ 28 ನಗರಗಳಲ್ಲಿರುವ ಅಂಚೆ ಇಲಾಖೆಯ ಪ್ರಧಾನ ಕಛೇರಿಗಳಲ್ಲಿ ಶೂನ್ಯ ದಾಸ್ತಾನು ಲಭ್ಯವಿದೆ. ಬೆಂಗಳೂರು, ಬಳ್ಳಾರಿ, ಹೊಸಪೇಟೆ, ಬೀದರ್, ಅಥಣಿ, ಚಿಕ್ಕೋಡಿ, ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಕಲಬುರಗಿ, ಹಾಸನ ಮತ್ತು ಅರಸಿಕೆರೆಯಲ್ಲಿಯೂ ಅಂತಹ ಅಂಚೆಚೀಟಿಗಳು ಲಭ್ಯವಿಲ್ಲ.
ಅಂಚೆ ಇಲಾಖೆ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ ವಿಜಯಪುರದಲ್ಲಿ 1,16,928 ಅಂಚೆಚೀಟಿಗಳು, ಚಿತ್ರದುರ್ಗದಲ್ಲಿ 62,066, ಉಡುಪಿ 53,557, ಹಾವೇರಿ 52,224, ಮತ್ತು ಬಾಗಲಕೋಟೆ 30,504 ಸೇರಿದಂತೆ ಕೆಲವು ಕೇಂದ್ರ ಕಚೇರಿಗಳಲ್ಲಿ ಪರಿಸ್ಥಿತಿ ಉತ್ತಮವಾಗಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಖಾಸಗಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮ್ಯಾನೇಜರ್, ಬೆಂಗಳೂರಿನ ಅಂಚೆ ಕಚೇರಿಗಳು ತಮ್ಮ ಬಳಿ ಸ್ಟಾಕ್ ಇಲ್ಲ ಎಂದು ಕೆಲವು ಸಮಯದಿಂದ ಹೇಳುತ್ತಿವೆ. ನಾನು ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಬಿಲ್ಲಿಂಗ್ ಒದಗಿಸಬೇಕಾದರೆ, ನಾವು ಕಡ್ಡಾಯವಾಗಿ ಕಂದಾಯ ಸ್ಟ್ಯಾಂಪ್ ಬಳಸಬೇಕಾಗುತ್ತದೆ. ಮಹಾರಾಷ್ಟ್ರದಿಂದ ಖರೀದಿಸಲಾದ ಸ್ಟ್ಯಾಂಪ್ ಗಳನ್ನು ಬೆಳಗಾವಿಯಲ್ಲಿ ಕಂಪನಿಯ ಸಿಬ್ಬಂದಿಯಿಂದ ಪಡೆದು ಹೇಗೊ ನಿರ್ವಹಣೆ ಮಾಡುತ್ತಿರುವುದಾಗಿ ನರಹರಿ ತಿಳಿಸಿದರು. ಅವರ ಪ್ರತಿಕ್ರಿಯೆಗಾಗಿ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಯಾರೂ ಸಂಪರ್ಕಕ್ಕೆ ಸಿಗಲಿಲ್ಲ.
ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಅವರನ್ನು ಕೇಳಿದಾಗ, “ಬೆಂಗಳೂರು ಮತ್ತು ಇತರ ಕೆಲವು ಜಿಲ್ಲೆಗಳಲ್ಲಿನ ಅಂಚೆ ಕಚೇರಿಗಳಲ್ಲಿ ಸುಮಾರು ನಾಲ್ಕು ತಿಂಗಳಿಂದ ರೆವಿನ್ಯೂ ಸ್ಟ್ಯಾಂಪ್ ಲಭ್ಯವಿಲ್ಲ. ಈ ವಿಚಾರ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು, ನಾವು ಕೆಲವು ಅಂಚೆ ಕಚೇರಿಗಳಲ್ಲಿ ಲಭ್ಯವಿರುವ ದಾಸ್ತಾನನ್ನು ಉಳಿದವುಗಳೊಂದಿಗೆ ಮರುಹಂಚಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
Advertisement