ಬೆಂಗಳೂರು: ಜೈಲಿನಿಂದ ಹೊರಬಂದಿದ್ದು, ಇನ್ನು ಮುಂದೆ ನಾನೇ ನಿಮಗೆಲ್ಲಾ ಬಾಸ್ ಎಂದು ಹೇಳಿ ಬೆದರಿಕೆ ಹಾಕುತ್ತಿದ್ದ ರೌಡಿ ಶೀಟರ್'ವೊಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹತ್ಯೆಯಾದ ರೌಡಿ ಶೀಟರ್ ನನ್ನು ರೇಣುಕುಮಾರ್ (24) ಎಂದು ಗುರ್ತಿಸಲಾಗಿದೆ. ಈತನ ವಿರುದ್ಧ ಕೊಲೆ ಯತ್ನ, ಹಲ್ಲೆ, ದರೋಡೆ ಸೇರಿ ಮುಂತಾದ ಕೃತ್ಯ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ.
ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ರೇಣುಕುಮಾರ್ ಕಳೆದ ತಿಂಗಳು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಕೆಲ ದಿನಗಳ ಹಿಂದಷ್ಟೇ ನಾನೇ ನಿಮಗೆಲ್ಲಾ ಬಾಸ್. ಇನ್ನು ಮುಂದೆ ಎಲ್ಲರೂ ನನ್ನ ಮಾತನ್ನು ಕೇಳಬೇಕು. ಇಲ್ಲದಿದ್ದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ಥಳೀಯರಿಗೆ ಬೆದರಿಕೆ ಹಾಕಿದ್ದ. ಇದರಿಂತ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಗ್ಯಾಂಗ್ ವೊಂದು ಈತನ ಹತ್ಯೆಗೆ ಸಂಚು ರೂಪಿಸಿದೆ.
ಇದರಂತೆ ಗುರುವಾರ ರಾತ್ರಿ 7.45ರ ಸುಮಾರಿಗೆ ರಾಘ ಅಪಾರ್ಟ್'ಮೆಂಟ್ ಬಳಿ ರೇಣುಕುಮಾರ್ ನಿಂತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿರುವ ಗ್ಯಾಂಗ್ ಆತನ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ, ಹತ್ಯೆ ಮಾಡಿದೆ. ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ರೇಣುಕುಮಾರ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂದ ರೇಣುಕುಮಾರ್ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Advertisement
Advertisement