ಬೆಂಗಳೂರು: ತಮ್ಮ ಜೀವಿತ ಪ್ರಮಾಣಪತ್ರವನ್ನು ನವೀಕರಿಸಲು ಸರ್ಕಾರಿ ದಾಖಲೆಗಳನ್ನು ಹಂಚಿಕೊಂಡ ನಂತರ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ 1.27 ಲಕ್ಷ ರೂ. ಗಳನ್ನು ವಂಚಿಸಲಾಗಿದೆ. ಜೀವಿತ ಪ್ರಮಾಣಪತ್ರ ಎನ್ನುವುದು ಸರ್ಕಾರಿ ನೌಕರರಿಗೆ ಪಿಂಚಣಿ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಲು ಒದಗಿಸಲಾದ ಬಯೋಮೆಟ್ರಿಕ್-ಸಕ್ರಿಯ ಸೇವೆಯಾಗಿದೆ.
ಜೀವಿತ ಪ್ರಮಾಣಪತ್ರವನ್ನು ಡಿಜಿಟಲ್ ಆಗಿ ನವೀಕರಿಸಲು, ಸಂತ್ರಸ್ತರು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಆರೋಪಿಯು ಬ್ಯಾಂಕ್ ಉದ್ಯೋಗಿಯಂತೆ ನಟಿಸಿ, ಅವರ ಸಂಪರ್ಕಕ್ಕೆ ಬಂದಿದ್ದಾನೆ. ಸಹಾಯ ಮಾಡುವ ನೆಪದಲ್ಲಿ ಆರೋಪಿ ಸಂತ್ರಸ್ತರ ಸರ್ಕಾರಿ ಗುರುತಿನ ಚೀಟಿ ನೀಡುವಂತೆ ಮನವಿ ಮಾಡಿದ್ದಾರೆ ಮತ್ತು 1.27 ಲಕ್ಷ ರೂ. ದೋಚಿದ್ದಾರೆ.
ಯೋಗ ತರಬೇತುದಾರರಾದ 37 ವರ್ಷದ ರೋಹಿತ್ ಕೆಎಸ್ ಮಾತನಾಡಿ, 'ನನ್ನ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಶಿವಸ್ವಾಮಿ ಎಸ್, ಹೃದಯ ರೋಗಿ. ನಾನು ನನ್ನ ತಂದೆಯ ಖಾತೆಯಿರುವ ಬ್ಯಾಂಕನ್ನು ಸಂಪರ್ಕಿಸಿದೆ ಮತ್ತು ಬ್ಯಾಟರಾಯನಪುರದ ಬ್ಯಾಂಕ್ಗೆ ಭೇಟಿ ನೀಡಿದ್ದೇನೆ. ನಂತರ ಅವರು ನನಗೆ ನಂಬರ್ ಮತ್ತು ಲಿಂಕ್ ಅನ್ನು ನೀಡಿದರು. ನಾನು ಬ್ಯಾಂಕ್ ಒದಗಿಸಿದ ನಂಬರ್ಗೆ ಕರೆ ಮಾಡಿದೆ ಮತ್ತು ಐಡಿ ವಿವರಗಳನ್ನು ಒದಗಿಸಲು ಟೈಮ್ ಸ್ಲಾಟ್ ಅನ್ನು ಆಯ್ಕೆ ಮಾಡಿದೆ. ನಾನು ನನ್ನ ಸ್ಲಾಟ್ಗಳನ್ನು ಸುಮಾರು 8-9 ಬಾರಿ ಕಾಯ್ದಿರಿಸಿದ್ದೇನೆ ಮತ್ತು ಬ್ಯಾಂಕಿನಿಂದ ಮರಳಿ ಕರೆ ಮಾಡುವುದಾಗಿ ಭರವಸೆ ನೀಡುವ ಸಂದೇಶವನ್ನು ಸತತವಾಗಿ ಸ್ವೀಕರಿಸಿದ್ದೇನೆ. ಆದರೆ, ಬ್ಯಾಂಕ್ನಿಂದ ಯಾವುದೇ ಕರೆ ಬರಲಿಲ್ಲ' ಎಂದರು.
ಶುಕ್ರವಾರ, ರೋಹಿತ್ ತನ್ನ ತಂದೆಯ ಫೋನ್ಗೆ ಬಂದ ಕರೆಯನ್ನು ಸ್ವೀಕರಿಸಿದರು.
'ಕರೆ ಮಾಡಿದ ಮಹಿಳೆ ತಾನು ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡರು ಮತ್ತು ನನ್ನ ತಂದೆಯ ಜೀವಿತ ಪ್ರಮಾಣಪತ್ರವನ್ನು ನವೀಕರಿಸಲು ಸಹಾಯ ಮಾಡುವುದಾಗಿ ಹೇಳಿದರು. ನಾನು ಸ್ಲಾಟ್ಗಳನ್ನು ಕಾಯ್ದಿರಿಸಲು ಪ್ರಯತ್ನಿಸುತ್ತಿರುವಾಗ, ಬಂದ ಕರೆಯನ್ನು ಕಾನೂನುಬದ್ಧ ಕರೆ ಎಂದು ನಂಬಿದೆ ಮತ್ತು ಸರ್ಕಾರಿ ಐಡಿ ವಿವರಗಳನ್ನು ಆಕೆಯೊಂದಿಗೆ ಹಂಚಿಕೊಂಡೆ. ನಂತರ ನಾನು ನನ್ನ ಬ್ಯಾಂಕ್ನಿಂದ ಒಟಿಪಿ ಸ್ವೀಕರಿಸಿದೆ.
ಸಂದೇಶದಲ್ಲಿ ನನ್ನ ಬ್ಯಾಂಕ್ ಹೆಸರನ್ನು ಉಲ್ಲೇಖಿಸಿದ್ದರಿಂದ, ನಾನು ಅವರೊಂದಿಗೆ ಒಟಿಪಿ ಹಂಚಿಕೊಂಡೆ. ಸ್ವಲ್ಪ ಸಮಯದೊಳಗೆ, ಸಂಪೂರ್ಣ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಡೆಬಿಟ್ ಮಾಡಲಾಗಿದೆ. ನನ್ನ ಪೋಷಕರು ಅನಾರೋಗ್ಯಕ್ಕೀಡಾಗಿದ್ದಾರೆ ಮತ್ತು ಆ ಹಣವೇ ನಮ್ಮ ಏಕೈಕ ಉಳಿತಾಯವಾಗಿದೆ' ಎಂದು ರೋಹಿತ್ ಹೇಳಿದರು.
ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement