ಬೆಂಗಳೂರು ಮತದಾನ ಪ್ರಮಾಣ ಹೆಚ್ಚಳಕ್ಕೆ Vote-A-Thon ಸ್ಪರ್ಧೆ ಆಯೋಜನೆ: ಬಿಬಿಎಂಪಿ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ Vote-A-Thon ಸ್ಪರ್ಧೆ ಆಯೋಜನೆ ಮಾಡಿದೆ.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ Vote-A-Thon ಸ್ಪರ್ಧೆ ಆಯೋಜನೆ ಮಾಡಿದೆ.

ವಿಧಾನಸಭೆ ಚುನಾವಣೆ-2023ರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗುವಂತೆ ಮಾಡಲು ಬಿಬಿಎಂಪಿಯು ವಿನೂತನವಾಗಿ "ವೋಟ್-ಎ-ಥಾನ್" (VOTE-A-THON) ಎಂಬ ಸ್ಪರ್ಧೆಯನ್ನು ಏರ್ಪಡಿಸಿದೆ. ಮತದಾನ ಪ್ರಮಾಣ ಹೆಚ್ಚಿಸಲು ಆರಂಭಿಸಿರುವ ವಿನೂತನ ವೋಟ್-ಎ-ಥಾನ್ ಸ್ಪರ್ಧೆ ಏ.30ರ ವರೆಗೆ ನಗರದ ಎಲ್ಲ ವಿಧಾನಸಭಾ ಚನಾವಣಾ ಕ್ಷೇತ್ರಗಳಲ್ಲಿ ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಬೆಂಗಳೂರಿನ ಜನತೆ ಚುನಾವಣೆ ಕುರಿತು ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಮಾಡುವ ವೋಟ್-ಎ-ಥಾನ್ ಸ್ಪರ್ಧೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಚಾಲನೆ ನೀಡಿದರು. ಸೋಶಿಯಲ್‌ ಮೀಡಿಯಾದಲ್ಲಿ ಚುನಾವಣೆಯ ವೇಳೆ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಉತ್ತಮ ಸಂದೇಶವುಳ್ಳ ರೀಲ್ಸ್‌ ಮಾಡಿದವರಿಗೆ 10 ಸಾವಿರ ರೂ. ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಿದರು. 

Vote-A-Thon ಸ್ಪರ್ಧೆಯಲ್ಲಿ ಯಾರೆಲ್ಲ ಭಾಗವಹಿಸಬಹುದು
ವೋಟ್-ಎ-ಥಾನ್ ಸ್ಪರ್ಧೆಯು ಬೆಂಗಳೂರು ಜಿಲ್ಲೆಯ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 17 ರಿಂದ ಏಪ್ರಿಲ್ 30 ರವರೆಗೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಕ್ರಿಯಾತ್ಮಕ ಆಲೋಚನೆಗಳ ಮೂಲಕ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಮಾಡಿ ಹ್ಯಾಶ್ ಟ್ಯಾಗ್ (#Vote-A-Thon) ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಬೇಕು. ಅಥವಾ ಇ-ಮೇಲ್ ಐಡಿ contact-us@bbmp.gov.inಗೆ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳನ್ನು ಏಪ್ರಿಲ್ 30 ರೊಳಗಾಗಿ ಕಳುಹಿಸಬೇಕು. ಕ್ರಿಯಾತ್ಮಕವಾಗಿ ರಚಿಸಿದ ರೀಲ್ಸ್, ಪೋಸ್ಟರ್ಸ್, ಸ್ಲೋಗನ್ ಮತ್ತು ಜಿಂಗಲ್ಸ್ ಗಳಿಗೆ ನಗದು ಬಹುಮಾನ, ಪ್ರಮಾಣ ಮತ್ರ ಹಾಗೂ ಇನ್ನಿತ್ಯಾದಿ ಆಕರ್ಷಕ ಬಹುಮಾನಗಳನ್ನು ವಿತರಿಸಲಾಗುವುದು. 

ವೊಟ್-ಎ-ಥಾನ್ ಸ್ಪರ್ಧೆಯ ಮೂಲಕ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮತದಾರರಲ್ಲಿ ಉತ್ಸಾಹವನ್ನು ಉಂಟುಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂಬುದಾಗಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ನಿಮಿತ್ತ ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆಯೇ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com