ಕೆಜಿಎಫ್ ಬಾಬು ಮನೆಗೆ ಪೆಟ್ರೋಲ್ ಸುರಿದು ಬೆಂಕಿ, ಆತನದ್ದೇ ಕೈವಾಡ ಎಂದ ಬಾಬು!!

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆಜಿಎಫ್ ಬಾಬು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಕೆಜಿಎಫ್ ಬಾಬು ಮನೆಗೆ ಬೆಂಕಿ
ಕೆಜಿಎಫ್ ಬಾಬು ಮನೆಗೆ ಬೆಂಕಿ

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆಜಿಎಫ್ ಬಾಬು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಕಾಂಗ್ರೆಸ್‍ನ ಉಚ್ಚಾಟಿತ ನಾಯಕ ಮತ್ತು ಉದ್ಯಮಿ ಕೆಜಿಎಫ್ ಬಾಬು ಅವರ ಮನೆಗೆ ನಿನ್ನೆ ರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ವಿದ್ವಂಸಕ ಕೃತ್ಯವೆಸಗುವ ಪ್ರಯತ್ನ ನಡೆದಿದೆ. 

ಬಾಬು ಅವರ ತಂದೆಗೆ ಸೇರಿದ ಕೆಎಸ್‍ಆರ್ ಗಾರ್ಡನ್‍ನ ಮನೆಯ ಮೇಲೆ ನಿನ್ನೆ ರಾತ್ರಿ ಏಳೆಂಟು ಮಂದಿ ದಾಳಿ ನಡೆಸಿದ್ದು, ಮನೆಯ ಮುಂದೆ ಹಾಕಲಾಗಿದ್ದ ಬ್ಯಾನರ್ ಮತ್ತು ಮೊದಲ ಮಹಡಿಯಲ್ಲಿದ್ದ ಶೂ ರ್ಯಾಕ್‍ಗೆ ಪೆಟ್ರೊಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಬೆಂಕಿ ವ್ಯಾಪಿಸಿ ಒಂದಷ್ಟು ವಸ್ತುಗಳು ಸುಟ್ಟು ಹೋಗಿವೆ. ರಾತ್ರಿ 2.30 ಗಂಟೆ ಸುಮಾರಿನಲ್ಲಿ ಘಟನೆ ನಡೆದಿದ್ದು, ಬಾಬು ಅವರ ಸಹೋದರಿ ಶ ಹಿನ್ ತಾಜ್ ಅವರು, ಈ ಬಗ್ಗೆ ಸಂಪಂಗಿ ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೊಲೀಸ್ ಠಾಣೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ.ಎಫ್.ಬಾಬು, ಮನೆಗೆ ಬೆಂಕಿ ಹಚ್ಚಲು ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ಪುತ್ರನೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಇದು ರಾಜಕೀಯ ವೈಷಮ್ಯಕ್ಕಾಗಿ ನಡೆದ ಕೃತ್ಯವಾಗಿದೆ. ನಮಗೆ ನ್ಯಾಯಕೊಡಿಸಿ ಎಂದು ಮನವಿ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ನನ್ನ ತಂಗಿಗೆ ಬೆದರಿಕೆ ಹಾಕಲಾಗುತ್ತಿತ್ತು. ಚಿಕ್ಕಪೇಟೆ ಕ್ಷೇತ್ರದಿಂದ ದೂರ ಇರಲು ನಿಮ್ಮ ಅಣ್ಣನಿಗೆ ಹೇಳು ಇಲ್ಲವಾದರೆ ಕೊಲೆ ಮಾಡಿಬಿಡುತ್ತೇವೆ ಎಂದು ಹೆದರಿಸಲಾಗುತ್ತಿತ್ತು. ಆರ್.ವಿ.ದೇವರಾಜ್ ಅವರ ಪುತ್ರ ಯುವದೇವರಾಜ್ ಮತ್ತು ಆತನ ಸಂಗಡಿಗರು ನಿನ್ನೆ ರಾತ್ರಿ 2.45ರ ಸುಮಾರಿಗೆ ನನ್ನ ತಂಗಿ ವಾಸವಾಗಿರುವ ಮನೆ ಬಳಿ ಬಂದು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ದೂರು ನೀಡಿದ್ದೇವೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಬಾಬು ತಿಳಿಸಿದ್ದಾರೆ.

ಹಿನ್ನೆಲೆ: 
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ರ್ಪಸಲು ಮಾಜಿ ಶಾಸಕರು ಆಗಿರುವ ಆರ್.ವಿ. ದೇವರಾಜ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತೀಚೆಗೆ ಕೆಜಿಎಫ್ ಬಾಬು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೋಂಡು ವಿಧಾನಪರಿಷತ್ ಚುನಾವಣೆಯಲ್ಲಿ ಸ್ರ್ಪಧಿಸಿ ಸೋಲು ಕಂಡಿದ್ದರು. ನಂತರ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಲು ಚಿಕ್ಕಪೇಟೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು.

ಮನೆಮನೆ ಪ್ರಚಾರ, ವಿದ್ಯಾರ್ಥಿವೇತನ ನೀಡುವುದು ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ಗುರುತಿಸಿ ಕೊಳ್ಳಲಾರಂಭಿಸಿದರು. ಪಕ್ಷದ ಆಂತರಿಕ ಕಲಹದಿಂದ ಸಿಟ್ಟಾಗಿ ಪಕ್ಷದ ಕಚೇರಿಗೂ ಹೋಗಿ ಗಲಾಟೆ ಮಾಡಿದರು. ಪಕ್ಷ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಕಾಂಗ್ರೆಸ್‍ನಿಂದ ಅವರನ್ನುಉಚ್ಚಾಟಿಸಲಾಗಿದೆ.

ನಿನ್ನೆ ರಾತ್ರಿ ಬೆಂಕಿ ಅವಘಡ ನಡೆದ ಮನೆ ಬಾಬು ಅವರ ತಂದೆ ಹೆಸರಿನಲ್ಲಿ ನೋಂದಣಿಯಾಗಿದೆ. ತವರು ಮನೆ ಎಂಬ ಕಾರಣಕ್ಕೆ ಭಾವನಾತ್ಮಕ ನಂಟು ಹೊಂದಿದ್ದ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರ ಅಲ್ಲಿ ವಾಸವಿದ್ದರು. ನಿನ್ನೆ ಬೆಂಕಿ ಅವಗಡ ನಡೆದಾಗ ಕುಟುಂಬದ ಸದಸ್ಯರು ಮನೆಯ ಒಳಗೆ ಇದ್ದರು. ಹೊರಗೆ ಬೆಂಕಿ ಉರಿಯುವುದನ್ನು ಕಂಡು ಒಳಗಿನಿಂದ ನೀರು ತಂದು. ಎರಚಿ ಬೆಂಕಿ ನಂದಿಸಿದ್ದಾರೆ.

ಈ ಘಟನೆ ಮೂಲಕ ಚುನಾವಣೆ ಕಾವು ಪಡೆಯುವ ಮುನ್ನವೇ ನಗರದ ಹೃದಯ ಭಾಗವಾದ ಚಿಕ್ಕಪೇಟೆ ಕ್ಷೇತ್ರದಲ್ಲಿ ರಣಾಂಗಣದ ಚಿತ್ರಣ ಬಿಂಬಿತವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com