ಸ್ಯಾಂಕಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಲು ನಿವಾಸಿಗಳ ಒತ್ತಾಯ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸ್ಯಾಂಕಿ ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ಯೋಜನೆಗೆ ಎರಡು ದಿನಗಳ ಹಿಂದೆ ಬ್ರೇಕ್ ಹಾಕಿದ್ದರೂ, ಸರ್ಕಾರ ಒಮ್ಮೆಲೇ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಸರಣಿ ಪ್ರತಿಭಟನೆ ಹಾಗೂ ಹೋರಾಟ ನಡೆಸಲು ನಾಗರಿಕರು ಮುಂದಾಗಿದ್ದಾರೆ.
ಈ ಯೋಜನೆಗೆ 50 ಮರಗಳನ್ನು ಕಡಿಯಬೇಕಾಗಿತ್ತು. ಅಲ್ಲಿನ ನಿವಾಸಿಗಳು ಮತ್ತು ಇತರ ಮಧ್ಯಸ್ಥಗಾರರ ಪ್ರತಿಭಟನೆ ನಂತರ, ಪಾಲಿಕೆಯು ಉಪ ಅರಣ್ಯ ಸಂರಕ್ಷಣಾಧಿಕಾರಿಯಿಂದ ಯೋಜನೆಯ ಕಡತವನ್ನು ಹಿಂಪಡೆದಿದೆ.
'ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್ಟಿಎ) ಒಪ್ಪಿಗೆ ನೀಡಿದ ನಂತರವೇ ಈ ಯೋಜನೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಾಲಿಕೆ ಇತ್ತೀಚೆಗೆ ಹೇಳಿದೆ. ಆದರೆ, ಬಿಬಿಎಂಪಿ ಬಜೆಟ್ನಿಂದ, ನಾಗರಿಕ ಸಂಸ್ಥೆ ಇನ್ನೂ ತಾತ್ಕಾಲಿಕ ರೀತಿಯಲ್ಲಿ ಮೂಲಸೌಕರ್ಯವನ್ನು ಯೋಜಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಯೋಜನೆಯನ್ನು ರದ್ದುಗೊಳಿಸಿ ಸರ್ಕಾರಿ ಆದೇಶ ಹೊರಡಿಸುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ' ಎಂದು ಸಿಟಿಜನ್ ಫಾರ್ ಸ್ಯಾಂಕಿ ಸಹ ಸಂಸ್ಥಾಪಕಿ ಪ್ರೀತಿ ಸುಂದರರಾಜನ್ ಹೇಳಿದ್ದಾರೆ.
ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತಕ್ಕೆ ಸಂದೇಶ ಕಳುಹಿಸಲು ಪೋಸ್ಟರ್ಗಳನ್ನು ಮಾತ್ರ ಹಾಕಲಾಗುವುದು ಎಂದು ಕಾರ್ಯಕರ್ತರೊಬ್ಬರು ಹೇಳಿದರು.
ಯೋಜನೆ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ನಿವಾಸಿಗಳು ಮತ್ತು ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದ ಪರಿಸರ ಹೋರಾಟಗಾರ ವಿಜಯ್ ನಿಶಾಂತ್, ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಉಕ್ಕಿನ ಸೇತುವೆಯನ್ನು ಪ್ರಸ್ತಾಪಿಸಿತ್ತು. ಆದರೆ, ಆಕ್ಷೇಪಣೆಯಿಂದಾಗಿ ಸರ್ಕಾರವು ಯೋಜನೆಯನ್ನು ಕೈಬಿಡಬೇಕಾಯಿತು ಎಂದರು.
ಈ ಸಂದರ್ಭದಲ್ಲೂ ಸಾರ್ವಜನಿಕರ ಭಾವನೆಗೆ ಬೆಲೆ ನೀಡಬೇಕು. ಪಾಲಿಕೆ ನಿವಾಸಿಗಳ ಆಕ್ಷೇಪವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಕೈಬಿಡಬೇಕು. ಅಲ್ಲದೆ, ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮವನ್ನು ಪಾಲಿಕೆ ಅರಿತುಕೊಳ್ಳಬೇಕು ಎಂದು ತಿಳಿಸಿದರು.