ತಾಪಮಾನ ಏರಿಕೆಯಿಂದ ಪರದಾಟ: ಹೆಚ್ಚುತ್ತಿರುವ ಬಿಸಿಲಿನ ಶಾಖದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಜನರ ಹೋರಾಟ!

ಕರಾವಳಿ ಕರ್ನಾಟಕದಲ್ಲಿ ತಾಪಮಾನ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪುವುದರೊಂದಿಗೆ ನಿರಂತರ ಬಿಸಿಲಿನ ಝಳವನ್ನು ನಿಭಾಯಿಸಲು ಜನರು ಹೆಣಗಾಡುತ್ತಿದ್ದಾರೆ. ಮಂಗಳೂರಿನ ಪಣಂಬೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ತಾಪಮಾನ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪುವುದರೊಂದಿಗೆ ನಿರಂತರ ಬಿಸಿಲಿನ ಝಳವನ್ನು ನಿಭಾಯಿಸಲು ಜನರು ಹೆಣಗಾಡುತ್ತಿದ್ದಾರೆ. ಮಂಗಳೂರಿನ ಪಣಂಬೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸನ್‌ಬರ್ನ್ ಮತ್ತು ಇತರ ತಾಪಮಾನ ಸಂಬಂಧಿತ ಅಸ್ವಸ್ಥತೆಗಳೊಂದಿಗೆ ಬಳಲುತ್ತಿರುವ ಜನರು ಹೆಚ್ಚು ಜಾಗರೂಕರಾಗಿರಬೇಕಿದೆ. ಹವಾಮಾನ ವೈಪರೀತ್ಯಕ್ಕೆ ಪ್ರಕೃತಿ ಹಾನಿಯೇ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ.

ಬಂಟ್ವಾಳದ ಖಾಸಗಿ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ಸಂತೋಷ್ ಪೂಜಾರಿ ಅವರಿಗೆ ಬಿಸಿಲು ಅಲರ್ಜಿಯಾಗಿ ಚರ್ಮ ಸುಟ್ಟಿದೆ. 'ತಾಪಮಾನ ಏರಿಕೆ ಮಾನವ ನಿರ್ಮಿತ ದುರಂತ. ನಾವು ಹೆಚ್ಚು ಸಸಿಗಳನ್ನು ನೆಡಬೇಕು, ಈಗಿರುವ ಮರಗಳನ್ನು ಸಂರಕ್ಷಿಸಬೇಕು ಮತ್ತು ತೆರೆದ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸಬೇಕು ಮತ್ತು ಮರು ಶಕ್ತಿ ತುಂಬಬೇಕು' ಎಂದು ಮಂಗಳೂರಿನ ಜೋಶ್ವಾ ಹೇಳಿದ್ದಾರೆ. 

ಮಂಗಳೂರಿನ ಬ್ಯೂಟಿಷಿಯನ್ ಪ್ರೀತಿ ಡಿಸೋಜಾ ಮಾತನಾಡಿ, ‘ಕೆಲಸ ಮುಗಿಸಿ ಮನೆಗೆ ಬಂದ ಕ್ಷಣದಲ್ಲಿ ನನಗೆ ತುಂಬಾ ದಣಿವು, ಆಯಾಸ ಉಂಟಾಗುತ್ತಿದೆ. ನನ್ನ ಮಕ್ಕಳು ಸಹ ಹೊರಗಿನ ತೀವ್ರ ಶಾಖದ ಬಗ್ಗೆ ದೂರು ನೀಡುತ್ತಿದ್ದಾರೆ' ಎನ್ನುತ್ತಾರೆ.

<strong>ತಾಪಮಾನ ಏರಿಕೆಯಿಂದ ಬೇಸತ್ತು ಎಳನೀರು ಸೇವನೆಯಲ್ಲಿ ಮಂಗಳೂರಿಗರು</strong>
ತಾಪಮಾನ ಏರಿಕೆಯಿಂದ ಬೇಸತ್ತು ಎಳನೀರು ಸೇವನೆಯಲ್ಲಿ ಮಂಗಳೂರಿಗರು

'ಏರುತ್ತಿರುವ ತಾಪಮಾನವು ಜನರ ಕಾರ್ಯಕ್ಷಮತೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಆಯಾಸಕ್ಕೆ ಕಾರಣವಾಗುವ ಗಮನಾರ್ಹ ಶಕ್ತಿಯನ್ನು ಬಳಸುತ್ತದೆ. ಶಾಖ-ಪ್ರೇರಿತ ಒತ್ತಡವು ಹೆಚ್ಚಿದ ಹೃದಯರಕ್ತನಾಳದ ಅಪಾಯಗಳಿಗೆ ಕಾರಣವಾಗುತ್ತದೆ. ಇದಕ್ಕೆ ಪುರಾವೆಗಳು ಸಹ ಸಿಕ್ಕಿದೆ. ಮಂಗಳೂರಿನಲ್ಲಿ ದಿನನಿತ್ಯ ಪಟಾಕಿ ಸಿಡಿಸುತ್ತಿರುವುದರಿಂದ ಹವಾಮಾನ ಹದಗೆಡುತ್ತದೆ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವುದಲ್ಲದೆ, ಅಂತಿಮವಾಗಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ' ಎಂದು ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ.ಎಡ್ಮಂಡ್ ಫರ್ನಾಂಡಿಸ್ ಹೇಳಿದ್ದಾರೆ.

ಬೆಂಗಳೂರಿನ ಐಎಂಡಿ ವಿಜ್ಞಾನಿ ಪ್ರಸಾದ್ ಎ ಮಾತನಾಡಿ, ಬೇಸಿಗೆಯಲ್ಲಿ, ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದ ಸಂಭವನೀಯತೆ ಸುಮಾರು ಶೇ 50ರಷ್ಟಿದೆ. ಹವಾಮಾನದ ಮುನ್ಸೂಚನೆ ಪ್ರಕಾರ ಮತ್ತು ಈಗ ತಾಪಮಾನದಲ್ಲಿ ಸ್ವಲ್ಪ ಕುಸಿತವಿದೆ. ಮಾರ್ಚ್ ಮೂರನೇ ವಾರ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲೆಯು ಮಾರ್ಚ್ 3, 4, 5 ಮತ್ತು 10 ರಂದು ಎರಡು ಬಿಸಿ ಗಾಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ ಡಿಎಚ್‌ಒ ಡಾ.ಕಿಶೋರ್ ಕುಮಾರ್ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಏರುಪೇರು ಉಂಟಾಗುತ್ತಿದೆ. ಶಾಖದ ಅಲೆ ಮತ್ತು ಏರುತ್ತಿರುವ ತಾಪಮಾನವು ನಿರ್ಜಲೀಕರಣ, ಸ್ನಾಯು ಸೆಳೆತ, ವೈರಲ್ ಸೋಂಕುಗಳಿಗೆ ಕಾರಣವಾಗುತ್ತದೆ ಮತ್ತು ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಪ್ರತಿಯೊಬ್ಬರೂ ಸಾಕಷ್ಟು ನೀರು, ಹಣ್ಣಿನ ರಸಗಳು, ನಿಂಬೆ ಪಾನಕ, ಮಜ್ಜಿಗೆ ಮತ್ತು ಎಳನೀರನ್ನು ಕುಡಿಯಬೇಕು. ಇದು ದೇಹದ ಜೀವಸತ್ವಗಳು ಮತ್ತು ಖನಿಜಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜನರು ಬಿಸಿಲಿನಲ್ಲಿ ತಿರುಗಾಡುವುದನ್ನು ತಪ್ಪಿಸಬೇಕು. ಮೂರ್ಛೆ ಅಟ್ಯಾಕ್ ಅಥವಾ ತೀವ್ರ ದೌರ್ಬಲ್ಯ ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com