ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಮುಂಗಾರು ಮಳೆ ಸಾಧ್ಯತೆ: ತಜ್ಞರು

ಈ ವರ್ಷ ಕರ್ನಾಟಕದಲ್ಲಿ ಅವಧಿಗೂ ಮುನ್ನ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಅವಧಿ ಪೂರ್ವ ಮುಂಗಾರುಮಳೆ
ಕರ್ನಾಟಕದಲ್ಲಿ ಅವಧಿ ಪೂರ್ವ ಮುಂಗಾರುಮಳೆ

ಬೆಂಗಳೂರು: ಈ ವರ್ಷ ಕರ್ನಾಟಕದಲ್ಲಿ ಅವಧಿಗೂ ಮುನ್ನ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಈ ವರ್ಷ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆಯಿದೆ ಎಂದು ತಜ್ಞರು  ಹೇಳಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮಾರ್ಚ್ 6ರಿಂದ 8ರ ನಡುವೆ ಅಕಾಲಿಕ ಮಳೆಯಾಗಿದ್ದು, ಇದು ಹಲವೆಡೆ ಬೆಳೆ ಹಾನಿಗೂ ಕಾರಣವಾಗಿದೆ. 

ಅಂತೆಯೇ ದೇಶದ ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ಮಾರ್ಚ್‌ 15ರ ತನಕ ಹಗುರವಾದ ಮಳೆಯಾಗಲಿದೆ. ಮಾರ್ಚ್‌ 16ರಿಂದ 22ರ ತನಕ ದೇಶದ ದಕ್ಷಿಣ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.

1901ರ ಬಳಿಕ ಕಳೆದ ಫೆಬ್ರುವರಿಯು ಅತ್ಯಂತ ಬಿಸಿಲಿನಿಂದ ಕೂಡಿತ್ತು. ಈ ರೀತಿ ಹವಾಮಾನ ವಾತಾವರಣದಿಂದ ಮುಂಗಾರು ಪೂರ್ವ ಮಳೆ ಅವಧಿಗೂ ಮುನ್ನವೇ ಬರಲಿದೆ. ಸಾಮಾನ್ಯವಾಗಿ ಮುಂಗಾರು ಪೂರ್ವ ಮಾರುತಗಳು ಮಾರ್ಚ್‌ ಮಧ್ಯದಲ್ಲಿ ರಚನೆಯಾಗುತ್ತವೆ. ಈ ವರ್ಷ ಬೇಗ ಸೃಷ್ಟಿಯಾಗಿವೆ. ಹೆಚ್ಚಿರುವ ಉಷ್ಣಾಂಶವು ಇದಕ್ಕೆ ಕಾರಣವಾಗಿದೆ’ ಎಂದು ಸ್ಕೈಮೆಟ್‌ನ ಹವಾಮಾನ ತಜ್ಞ ಮಹೇಶ್‌ ಮಲಾವತ್‌ ಹೇಳಿದ್ದಾರೆ. 

ಮುಂದಿನ 24 ಗಂಟೆಗಳಲ್ಲಿ ದೇಶದ ಹಲವೆಡೆ ಮಳೆ
ಕೊಂಕಣದ ವಿವಿಧ ಪ್ರದೇಶಗಳಲ್ಲಿ ಬಿಸಿಗಾಳಿ ಮುಂದುವರಿದಿದ್ದು, ಮುಂದಿನ 24 ಗಂಟೆಗಳಲ್ಲಿ ಹವಾಮಾನ ಚಟುವಟಿಕೆ ಬಿರುಸುಗೊಳ್ಳುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ, ಪಶ್ಚಿಮ ಹಿಮಾಲಯ, ಉತ್ತರ ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ನೈಋತ್ಯ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದ್ದು, ಅಂತೆಯೇ ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಕೇರಳದ  ಹಲವೆಡೆಯಲ್ಲೂ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈ ಮೇಟ್ ವರದಿ ಮಾಡಿದೆ.

ಮಾರ್ಚ್ 14 ರಂದು ಆಗ್ನೇಯ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಈಶಾನ್ಯ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮಿಂಚು ಸಂಭವಿಸಬಹುದು. ಮುಂದಿನ 24 ರಿಂದ 48 ಗಂಟೆಗಳ ಅವಧಿಯಲ್ಲಿ ವಾಯುವ್ಯ ಮಧ್ಯ ಭಾರತದ ಮೇಲೆ ಹಗಲಿನ ತಾಪಮಾನವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕೊಂಕಣದ ಕೆಲವು ಭಾಗಗಳಲ್ಲಿ ಶಾಖದ ಅಲೆಯ ಪರಿಸ್ಥಿತಿ ಮುಂದುವರಿಯಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com