ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ: ಪಾರ್ಕ್ ನಲ್ಲಿ ಕುಳಿತಿದ್ದ ಯುವತಿ ಎಳೆದೊಯ್ದು ಗ್ಯಾಂಗ್ ರೇಪ್; ಕಾರಿನಲ್ಲೇ ನಾಲ್ವರಿಂದ ಅತ್ಯಾಚಾರ

ಸ್ನೇಹಿತನ ಜೊತೆ ಪಾರ್ಕ್​ನಲ್ಲಿ ಕುಳಿತಿದ್ದ ಯುವತಿಯನ್ನ ನಾಲ್ವರು ಸೇರಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ನೇಹಿತನ ಜೊತೆ ಪಾರ್ಕ್​ನಲ್ಲಿ ಕುಳಿತಿದ್ದ ಯುವತಿಯನ್ನ ನಾಲ್ವರು ಸೇರಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೋರಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮಾರ್ಚ್ 25ರ ರಾತ್ರಿ 10 ಗಂಟೆಗೆ ಘಟನೆ  ನಡೆದಿದೆ. ಸರ್ಕಾರಿ ನೌಕರರು ಇರುವ ನ್ಯಾಷನಲ್ ಗೇಮ್ಸ್ ವಿಲೇಜ್​​​​ ಪಾರ್ಕ್​ನಲ್ಲಿ ಯುವತಿ ಹಾಗೂ ಆಕೆಯ ಸ್ನೇಹಿತ ಕುಳಿತುಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ನಾಲ್ವರು ಯುವಕರು ಆಕೆಯ ಸ್ನೇಹಿತನನ್ನ ಬೆದರಿಸಿ, ಯುವತಿಯನ್ನು ಎಳೆದೊಯ್ದು ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರ ಮಾಡಿದ್ದಾರೆ.

ರಾತ್ರಿ ವೇಳೆ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಕಾಮುಕರು ಬೆಳಗಿನ ಜಾವ 4 ಗಂಟೆಗೆ ಆಕೆಯನ್ನು ಬಿಟ್ಟುಹೋಗಿದ್ದಾರೆ. ಸತೀಶ್, ವಿಜಯ್, ಶ್ರೀಧರ್, ಕಿರಣ್ ಎಂಬುವವರು ಈ ಕೃತ್ಯವೆಸಗಿದ್ದು, ರೇಪ್ ಮಾಡಿ ಸಂತ್ರಸ್ತೆಯನ್ನ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ.

ಈ ಕಾಮುಕರು ಕೆಎ 01 ಎಂಬಿ 6169 ಸಂಖ್ಯೆಯ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಕಾರಿನಲ್ಲಿ ಸುತ್ತಾಟ ನಡೆಸಿ ಕೃತ್ಯವೆಸಗಿದ್ದಾರೆ. ಬಳಿಕ ಮಾರ್ಚ್ 26ರ ಬೆಳಗ್ಗೆ 4 ಗಂಟೆಗೆ ಯುವತಿಯನ್ನ ಮನೆ ಬಳಿ ಬಿಟ್ಟು ಪರಾರಿಯಾಗಿದ್ದರು.

ನಂತರ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಳು. ಪೊಲೀಸರು ಇದೀಗ ನಾಲ್ವರು ಆರೋಪಿಗಳಾದ ಸತೀಶ್, ವಿಜಯ್, ಶ್ರೀಧರ್, ಕಿರಣ್ ಎಂಬುವವರನ್ನ ಬಂಧಿಸಿದ್ದಾರೆ.

ಪ್ರಕರಣ ದಾಖಲಾದ ಎಂಟು ಗಂಟೆಗಳ ನಂತರ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ನಾವು ವೈದ್ಯಕೀಯ ವರದಿಗಳಿಗಾಗಿ ಕಾಯುತ್ತಿದ್ದೇವೆ ಮತ್ತು ತನಿಖೆ ಇನ್ನೂ ನಡೆಯುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಡಿಪಿಸಿ (ಆಗ್ನೇಯ) ಸಿ.ಕೆ.ಬಾಬಾ ಹೇಳಿದ್ದಾರೆ.,

ಸಂತ್ರಸ್ತೆ ಕೂಡ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಆರೋಪಿಯನ್ನು ತಿಳಿದಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಆಕೆಯ ಪುರುಷ ಸ್ನೇಹಿತನ ಪಾತ್ರವಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com