ವಿಧಾನಸಭಾ ಚುನಾವಣೆ: ವಲಸಿಗ ಮತದಾರರ ಮೇಲೆ ಬಿಜೆಪಿ ಕಣ್ಣು, ಮನವೊಲಿಕೆಗೆ ಹಿಂದಿ ಭಾಷಣಕಾರರ ನಿಯೋಜನೆ!

ಬಿಜೆಪಿ ತನ್ನ ಮತಬ್ಯಾಂಕ್‌ಗಳನ್ನು ಉಳಿಸಿಕೊಳ್ಳಲು ಎಲ್ಲಾ ಕ್ಷೇತ್ರಗಳ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಈ ಪೈಕಿ ಕನ್ನಡ ಮಾತನಾಡದ ವಲಸಿಗರ ಮನವೊಲಿಸಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಜೆಪಿ ತನ್ನ ಮತಬ್ಯಾಂಕ್‌ಗಳನ್ನು ಉಳಿಸಿಕೊಳ್ಳಲು ಎಲ್ಲಾ ಕ್ಷೇತ್ರಗಳ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಈ ಪೈಕಿ ಕನ್ನಡ ಮಾತನಾಡದ ವಲಸಿಗರ ಮನವೊಲಿಸಲು ಮುಂದಾಗಿದೆ.

ವಲಸಿಗರ ಮನವೊಲಿಸಲು ಮುಂದಾಗಿರುವ ಕೇಸರಿ ಪಡೆಗಳು, ಹಿಂದಿ ಭಾಷೆ ಮಾತನಾಡುವ ಯುವ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ನಿಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

ವಿವಿಧ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಜೊತೆ ಸುಮಾರು 50 ಯುವ ನಾಯಕರು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.

ಪಾಟಿದಾರ್ ಚಳವಳಿಯ ನೇತೃತ್ವ ವಹಿಸಿದ್ದ ಗುಜರಾತ್ ಶಾಸಕ ಹಾರ್ದಿಕ್ ಪಟೇಲ್, ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ, ಮಹಾರಾಷ್ಟ್ರ ಶಾಸಕ ವಿನೋದ್ ತಾವ್ಡೆ, ಸೂರತ್ ಶಾಸಕ ಪ್ರವೀಣ್ ಘೋಘರಿ ಮತ್ತು ಜಾರ್ಖಂಡ್‌ನ ಮನೀಶ್ ಜೈಸ್ವಾಲ್ ಬಿಜೆಪಿ ಅಭ್ಯರ್ಥಿಗಳ ಜೊತೆಗೆ ನಿಂತು ಪ್ರಚಾರ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಬಿಟಿಎಂ ಲೇಔಟ್, ಮಹದೇವಪುರ ವಲಯ, ಸಿವಿ ರಾಮನ್ ನಗರ, ಬ್ಯಾಟರಾಯನಪುರ ಮತ್ತು ಬೆಂಗಳೂರು ದಕ್ಷಿಣ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ಸುಧಾರಿಸಲು ಈ ನಾಯಕರು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.

“ಹಿಂದಿ ಮಾತನಾಡುವವರು ಶೇಕಡಾ 25 ಕ್ಕಿಂತ ಹೆಚ್ಚು ಮತದಾರರಿದ್ದಾರೆ, ಎಲ್ಲರೂ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತಿದ್ದಾರೆ. ಗುಜರಾತ್‌ನ ಅಭಿವೃದ್ಧಿ ಮಾದರಿಯನ್ನು ರಾಜ್ಯದಲ್ಲಿಯೂ ಪುನರಾವರ್ತಿಸಬೇಕೆಂದು ಅವರು ಬಯಸುತ್ತಾರೆಂದು ಬಿಟಿಎಂ ಲೇಔಟ್ ನಲ್ಲಿ ಪ್ರಚಾರದಲ್ಲಿ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಹಾರ್ದಿಕ್ ಪಟೇಲ್ ಅವರು ಹೇಳಿದ್ದಾರೆ.

ಇನ್ನು ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ ಅವರು ಮಲ್ಲೇಶ್ವರಂ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದು, ಈ ವರೆಗು 2 ದಿನಗಳ ಕಾಲ ಪ್ರಚಾರ ನಡೆಸಲಾಗಿದೆ. ಪ್ರಚಾರಕ್ಕೆ ಎರಡು ಗುಂಪುಗಳನ್ನು ರಚಿಸಲಾಗಿದೆ. ಮತದಾರರೊಂದಿಗೆ, ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಉತ್ತರ ಭಾರತದ ಅನೇಕ ನಿವಾಸಿಗಳು ಮತ್ತು ಉದ್ಯಮಿಗಳೊಂದಿಗೆ ಮಾತನಾಡಿದ್ದೇನೆ. ಅವರಲೆಲ್ಲರೂ ಬಿಜೆಪಿಗೆ ಮತ ಹಾಕುವ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ ವಲಸೆ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿರುವ ಮನೀಶ್ ಜೈಸ್ವಾಲ್ ಅವರು ತಳಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದಾರೆ ಮತ್ತು ಮನೆ-ಮನೆಗೆ ಪ್ರಚಾರ ನಡೆಸುತ್ತಿದ್ದಾರೆ.

ವಲಸಿಗರ ಮನವೊಲಿಸಲು ಪಕ್ಷವು ತನ್ನ ಪ್ರಣಾಳಿಕೆಯನ್ನು ಇಂಗ್ಲಿಷ್, ಹಿಂದಿ ಮತ್ತು ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ಸಿದ್ಧಪಡಿಸಿಕೊಂಡಿದೆ.

ತಮಿಳುನಾಡು ಮತ್ತು ಕೇರಳದ ನಾಯಕರನ್ನೂ ಪ್ರಚಾರಕ್ಕೆ ಅಣಿಗೊಳಿಸಿಲಾಗಿದ್ದು, ಮೊದಲ ಬಾರಿಗೆ ಮತದಾರರು ಬಿಜೆಪಿ ಪಕ್ಷಕ್ಕೆ ಮತ ಹಾಕುವಂತೆ ಮನವಿ ಮಾಡವ ಕೆಲಸದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com