ಬೆಂಗಳೂರು: ನಾಗರೀಕರ ಜೀವ ರಕ್ಷಣೆ ನಮ್ಮ ಕರ್ತವ್ಯವಾಗಿದ್ದು, ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಮಳೆಗೆ ಯುವತಿಯೊಬ್ಬಳು ಮೃತಪಟ್ಟ ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೆಕ್ಕಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನ 18 ಅಂಡರ್ಪಾಸ್ಗಳು ಸೇರಿದಂತೆ ರಾಜ್ಯದ ಎಲ್ಲಾ ಅಂಡರ್ಪಾಸ್ಗಳ ಕುರಿತು ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.
ಎಲ್ಲವೂ ಒಂದೇ ದಿನದಲ್ಲಿ ಆಗುವುದಿಲ್ಲ. ಆದರೆ, ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕಾ ಕ್ರಮಗಳ ಕೈಗೊಳ್ಳಲಾಗುತ್ತಿದೆ. ನಮ್ಮ ನಾಗರಿಕರ ಜೀವ ರಕ್ಷಣೆ ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಮಾತನಾಡಿ, ಭಾರೀ ಮಳೆ ಮತ್ತು ಅಂಡರ್ಪಾಸ್'ಗಳು ಜಲಾವೃತವಾಗುವುದು ಈ ಹಿಂದೆಯೂ ಆಗಿದೆ. ಆದರೆ ಈ ಹಿಂದೆ ಯಾವುದೇ ಸಾವು ಸಂಭವಿಸಿದ್ದು ನನಗೆ ನೆನಪಿಲ್ಲ . ಬಿಬಿಎಂಪಿಯ ಸಕಾಲಿಕ ಕ್ರಮ ಕೈಗೊಂಡಿದ್ದೇ ಆಗಿದ್ದರೆ ಸಾವನ್ನು ತಪ್ಪಿಸಬಹುದಿತ್ತು. ಬಿಬಿಎಂಪಿಯಿಂದ ಕೆಲವು ಲೋಪಗಳಾಗಿವೆ. ಅದನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.
Advertisement