ಬೆಂಗಳೂರು: ಸೌಂದರ್ಯದ ಆಕರ್ಷಣೆಯಿಂದಾಗಿ ನಗರದಲ್ಲಿ ಗಾಜಿನ ರಚನೆಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಯಾವುದೇ ಅಹಿತಕರ ಘಟನೆಗಳು ಪ್ರಮುಖವಾಗಿ ಅಗ್ನಿ ಅವಘಡ ಘಟನೆಗಳ ಸಂದರ್ಭದಲ್ಲಿ ಈ ಕಟ್ಟಡಗಳು ಸುರಕ್ಷಿತವಲ್ಲ ಎಂದು ಬಿಬಿಎಂಪಿ ಹೇಳಿದೆ.
ಗಾಜಿನ ರಚನೆಗಳಿಗೆ ಕಟ್ಟಡ ಯೋಜನೆ ಅನುಮತಿಗಳನ್ನು ನೀಡುವಾಗ, ವಿಶೇಷವಾಗಿ ಅಗ್ನಿ ಅವಘಡಗಳ ಸಂದರ್ಭದಲ್ಲಿ ಯಾವುದೇ ವಿಶೇಷ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಿಲ್ಲ ಎಂದು ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಒಪ್ಪಿಕೊಂಡಿದ್ದಾರೆ.
ನಗರದ ಕೋರಮಂಗಲದಲ್ಲಿ ವಾಣಿಜ್ಯ ಕಟ್ಟಡವೊಂದರ 4 ಅಂತಸ್ತಿನ ಮಹಡಿಯಲ್ಲಿದ್ದ ಕೆಫೆಯೊಂದರಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಗಳು ಸ್ಫೋಟಗೊಂಡು ಬುಧವಾರ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ನೇಪಾಳ ಮೂಲಕ ಕೆಲಸಗಾರನೊಬ್ಬ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಬಿಬಿಎಂಪಿ ಗಾಜಿನ ಕಟ್ಟಡಗಳ ಕುರಿತು ಸಮೀಕ್ಷೆ ನಡೆಸಲು ಸಿದ್ಧತೆಗಳ ನಡೆಸುತ್ತಿದೆ.
ಬಿಬಿಎಂಪಿ ಅಧಿಕಾರಿಯೊಬ್ಬರು ಮಾತನಾಡಿ, “ಗಾಜಿನ ಕಟ್ಟಡಗಳು ಸುರಕ್ಷಿತವಲ್ಲ. ಅವು ಪರಿಸರಕ್ಕೂ ಒಳ್ಳೆಯದಲ್ಲ. ಇಂತಹ ಕಟ್ಟಡಗಳಿಗೆ ಅನುಮತಿ ತಡೆಯಲು ನಿಯಮಗಳಿಲ್ಲ. ಕಾಂಕ್ರೀಟ್ ರಚನೆಗಳ ನಿರ್ಮಿಸಲಾದ ಕಟ್ಟಡದಲ್ಲಿ ಅಗ್ನಿ ಅವಘಡ ಸಂದರ್ಭದಲ್ಲಿ ಕಿಟಕಿ ಗಾಜುಗಳು ಒಡೆದು ಹೋಗುತ್ತವೆ. ಆದರೆ, ಗಾಜಿನ ಕಟ್ಟಡಗಳಲ್ಲಿ, ಸಂಪೂರ್ಣ ರಚನೆಯು ಬಿರುಕುಗಳಿಗೆ ಒಳಗಾಗುತ್ತದೆ, ಅಪಾಯವನ್ನು ಹೆಚ್ಚಿಸುತ್ತದೆ. ಗಾಜು ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತವೆ, ಇದರಿಂದ ಜನರು ತಪ್ಪಿಸಿಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತದೆ ಎಂದು ತಿಳಿಸಿದ್ದಾರೆ.
ಗಾಜಿನ ರಚನೆಗಳು 232 ಡಿಗ್ರಿ ಸೆಲ್ಸಿಯಸ್ ವರೆಗೆ ಬೆಂಕಿಯನ್ನು ನಿಭಾಯಿಸಬಲ್ಲವು ಎಂದು ವಾಸ್ತುಶಿಲ್ಪಿಗಳು ಮತ್ತು ತಜ್ಞರು ಹೇಳಿದ್ದಾರೆ.
ಯೋಮ್ ಎನ್ವಿರಾನ್ಮೆಂಟಲ್ನ ನಿರ್ದೇಶಕ ಮತ್ತು ವಾಸ್ತುಶಿಲ್ಪಿ ಶರತ್ ನಾಯಕ್ ಅವರು ಮಾತನಾಡಿ, ಬಿಬಿಎಂಪಿ ಸೂಕ್ತ ಸುರಕ್ಷತಾ ಕ್ರಮಗಳ ಕೈಗೊಳ್ಳಬೇಕು. ಅಗ್ನಿ ಅವಘಡ ಸಂದರ್ಭದಲ್ಲಿ ಗಾಜುಗಳು ಬಿರುಕು ಬೀಳುತ್ತವೆ. ಆದ್ದರಿಂದ ಎಚ್ಚರಿಕೆಗಳ ಪಾಲನೆ ಮಾಡವುದು ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಗಾಜು ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ನಿರೋಧಕ ಎಂದು ಹೇಳಲಾಗಿದ್ದರೂ, ಗುಣಮಟ್ಟದ ಬಗ್ಗೆ ಯಾವುದೇ ಪರಿಶೀಲನೆ ಇಲ್ಲ. ಗಾಜಿನ ಕಟ್ಟಡಗಳು ದೀರ್ಘಕಾಲದವರೆಗೆ ವಿಪತ್ತನ್ನು ಹಿಡಿದಿಟ್ಟುಕೊಳ್ಳಬಹುದು, ಆದರೆ ಅವುಗಳನ್ನು ಬಾಹ್ಯ ಸೌಂದರ್ಯಕ್ಕಾಗಿ ಮಾತ್ರ ಬಳಸಬೇಕು. ಯಾವುದೇ ಅಡೆತಡೆಗಳಿಲ್ಲದೆ ಇಡೀ ಕಟ್ಟಡಕ್ಕೆ ಗಾಜು ಬಳಸಿದ ಅನೇಕ ನಿದರ್ಶನಗಳಿವೆ ಎಂದು ಮತ್ತೊಬ್ಬ ವಾಸ್ತುಶಿಲ್ಪಿ ಹೇಳಿದ್ದಾರೆ.
Advertisement