ಬೆಂಗಳೂರು: ತಮಿಳುನಾಡಿನ ಸೇಲಂ ಮೂಲದ 27 ವರ್ಷದ ಯುವಕ ಸೋಮವಾರ ಮಧ್ಯಾಹ್ನ 2.30 ರ ಸುಮಾರಿಗೆ ರೇಸ್ ಕೋರ್ಸ್ ರಸ್ತೆಯ ಮಾಧವ ನಗರದ ರಿನೈಸಾನ್ಸ್ ಹೋಟೆಲ್ನ 19ನೇ ಮಹಡಿಯಿಂದ ಜಿಗಿದು ನಿಗೂಢವಾಗಿ ಸಾವಿಗೀಡಾಗಿದ್ದಾನೆ.
ಸಂತ್ರಸ್ತನನ್ನು ಶರಣ್ ಕುಮಾರನ್ ಎಂದು ಗುರುತಿಸಲಾಗಿದೆ. ಹೋಟೆಲ್ನ 19ನೇ ಮಹಡಿಯಲ್ಲಿರುವ ಬಾಲ್ಕನಿಯಿಂದ ಜಿಗಿದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆತ ಶನಿವಾರ ಹೋಟೆಲ್ಗೆ ಬಂದಿದ್ದ. ಸೋಮವಾರದವರೆಗೆ ಆತ ತನ್ನ ವಾಸ್ತವ್ಯವನ್ನು ವಿಸ್ತರಿಸಿದ್ದನು.
ಆತ ಹೋಟೆಲ್ಗೆ ಆಗ್ಗಾಗ್ಗೆ ಬರುತ್ತಿದ್ದರು ಮತ್ತು ಈ ಹಿಂದೆಯು ಕೆಲವು ಬಾರಿ ತಂಗಿದ್ದರು ಎಂದು ಹೇಳಲಾಗಿದೆ. ಚೆಕ್-ಇನ್ ಸಮಯದಲ್ಲಿ, ಆತ ವ್ಯವಹಾರದ ನಿಮಿತ್ತ ಬೆಂಗಳೂರಿನಲ್ಲಿರುವುದಾಗಿ ರಿಸಪ್ಷನ್ಗೆ ತಿಳಿಸಿದ್ದರು.
ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಡಿಸಿಪಿ (ಕೇಂದ್ರ) ಎಚ್ಟಿ ಶೇಖರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆ ನಡೆಯುವ ಕೆಲವು ನಿಮಿಷಗಳ ಮೊದಲು ಆತ 19ನೇ ಮಹಡಿಯ ಬಾಲ್ಕನಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಹೋಟೆಲ್ ಅತಿಥಿಗಳು, ಭದ್ರತಾ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಸೆಕ್ಯುರಿಟಿ ಆತನ ಬಳಿ ಬರುವಷ್ಟರಲ್ಲಿ ಆತ ಜಿಗಿದಿದ್ದಾನೆ. ಕುಮಾರನ್ ಒಬ್ಬರೇ ಹೋಟೆಲ್ಗೆ ಬಂದಿದ್ದರು ಎನ್ನಲಾಗಿದೆ.
ಘಟನೆ ನಂತರ, ಪೊಲೀಸರು ಅವರ ಕೊಠಡಿಯನ್ನು ಪರಿಶೀಲಿಸಿದಾಗ, ಅವರ ಆಧಾರ್ ಕಾರ್ಡ್ ಸಿಕ್ಕಿದೆ. ಸೇಲಂ ಜಿಲ್ಲಾ ಪೊಲೀಸರ ಮೂಲಕ ಅವರ ಕುಟುಂಬವನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆಗಳು ನಡೆಯುತ್ತಿವೆ.
Advertisement