ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಬಾವನೇ ಬಾಮೈದನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆಯೊಂದು ನಗರದ ವೆಂಕಟೇಶ್ವರಪುರದಲ್ಲಿ ಮಂಗಳವಾರ ನಡೆದಿದೆ.
ಕಿರಣ್ ಕುಮಾರ್ ಹತ್ಯೆಯಾದ ದುರ್ದೈವಿ. ಆರೋಪಿಯನ್ನು ಲಕ್ಷ್ಮಣ ಎಂದು ಗುರ್ತಿಸಲಾಗಿದೆ. ಆರೋಪಿ ಲಕ್ಷ್ಮಣ ಮತ್ತು ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಬಾವ, ಬಾಮೈದನ ನಡುವೆ ನಿನ್ನೆ ಗಲಾಟೆ ನಡೆದಿದೆ.
ಈ ನಡುವೆ ಯುಗಾದಿ ಹಬ್ಬದ ಪ್ರಯುಕ್ತ ವೆಂಕಟೇಶ್ವರಪುರದ ಗಲ್ಲಿಯಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಆರೋಪಿ ಕಿರಣ್ ಕುಮಾರ್'ಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.
ಇಸ್ಪೀಟ್ ಎಲೆಗಳ ಮೇಲಿದ್ದ ಹಣ ಎತ್ತಲು ಬಗ್ಗಿದಾಗ ಕಿರಣ್ ಕುಮಾರ್ ಬೆನ್ನಿಗೆ ಬಾವ ಲಕ್ಷ್ಮಣ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಗಾಯಾಳು ಕಿರಣ್ ಕುಮಾರ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಕುಮಾರ್ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement