
ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯ ವ್ಯಕ್ತಪಡಿಸಿದ್ದ ಕಳವಳಕ್ಕೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಸ್ಪಂದನೆ ನೀಡಿದ್ದು, ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಸ್ಥಳವನ್ನು ಬದಲಾಯಿಸಲು ನಿರ್ಧರಿಸಿದೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತದ 15,611 ಕೋಟಿ ರೂಪಾಯಿಯ ಯೋಜನೆಗೆ ಅನುಮತಿ ನೀಡಿತ್ತು.
ಇದರ ಬೆನ್ನಲ್ಲೇ ಔಟರ್ ರಿಂಗ್ ರೋಡ್ ನ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಪಿಇಎಸ್ ವಿಶ್ವವಿದ್ಯಾಲಯ ವಿರೋಧ ವ್ಯಕ್ತಪಡಿಸಿತ್ತು. ಪಿಇಎಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಜವಾಹರ್ ದೊರೆಸ್ವಾಮಿ, ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣದ ಸ್ಥಳವನ್ನು ಬದಲಾಯಿಸುವಂತೆ ಬಿಎಂಆರ್ಸಿಎಲ್ ಎಂಡಿ ಹಾಗೂ ಕೇಂದ್ರ ಸಚಿವ ಸೋಮಣ್ಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು.
ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಪ್ರವೇಶಿಸಲು, ಪಿಇಎಸ್ ವಿಶ್ವವಿದ್ಯಾಲಯಕ್ಕೆ ಸೇರಿರುವ 720 ಚ.ಅಡಿ ಭೂಮಿ ಅವಶ್ಯಕತೆ ಇದೆ. ಮೂರನೇ ಹಂತವು ಎರಡು ಎತ್ತರಿಸಿದ ಕಾರಿಡಾರ್ಗಳನ್ನು ಹೊಂದಿದೆ. ಔಟರ್ ರಿಂಗ್ ರೋಡ್ ನಲ್ಲಿ 31.15 ಕಿಮೀ ಮತ್ತು ಮಾಗಡಿ ರಸ್ತೆಯಲ್ಲಿ 12.5 ಕಿಮೀ ಹಾದು ಹೋಗಲಿದೆ. ಹೊಸಕೆರೆಹಳ್ಳಿ ನಮ್ಮ ಮೆಟ್ರೋ ನಿಲ್ದಾಣವು ಹೊರ ವರ್ತುಲ ರಸ್ತೆಯಲ್ಲಿ ದ್ವಾರಕಾನಗರ ಮತ್ತು ಕಾಮಾಕ್ಯ ಜಂಕ್ಷನ್ ನಡುವೆ ನಿರ್ಮಾಣವಾಗಲಿದೆ.
ಮೆಟ್ರೋ ನಿಲ್ದಾಣವಿರುವ ದಿಕ್ಕಿನಿಂದ ಸುಮಾರು 15 ಸಾವಿರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಪ್ರವೇಶಿಸುತ್ತಾರೆ. ವಿವಿ ಪಕ್ಕದಲ್ಲೇ ಇರುವ, ದಶಕಗಳಿಂದ ಖಾಲಿ ಉಳಿದಿರುವ ಸರ್ಕಾರಿ ಭೂಮಿಯಲ್ಲಿ ಮೆಟ್ರೋ ನಿಲ್ದಾಣವನ್ನು ಸ್ಥಾಪಿಸಬಹುದಾಗಿದೆ. ಇದರಿಂದ ವಶಪಡಿಸಿಕೊಳ್ಳುವ ಭೂಮಿಗೆ ಯಾವುದೇ ಪರಿಹಾರ ನೀಡುವ ಪ್ರಮೇಯವೂ ಉದ್ಭವಿಸುವುದಿಲ್ಲ. ಈ ಮೂಲಕ ವಿಶ್ವವಿದ್ಯಾಲಯ ಪಕ್ಕದಲ್ಲಿ ಕೇವಲ 50 ಮೀಟರ್ ಮುಂದಕ್ಕೆ ಸ್ಟೇಷನ್ ವರ್ಗಾಯಿಸಬಹುದಾಗಿದೆ, ಇಲ್ಲವೇ ಬಲ ಭಾಗದಲ್ಲಿ 100 ಮೀಟರ್ ಸಾಗಿದರೆ ಅಲ್ಲಿಯೂ ಮೆಟ್ರೋ ನಿಲ್ದಾಣವನ್ನು ಸ್ಥಾಪಿಸಬಹುದಾಗಿದೆ.
ಉದ್ದೇಶಿತ ಸ್ಥಳದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಿದರೆ ವಿಶ್ವವಿದ್ಯಾಲಯದ ಮುಖ್ಯ ದ್ವಾರವನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಎಂದು ಪಿಇಎಸ್ ವಿವಿ ತಿಳಿಸಿದೆ.
ಪಿಇಎಸ್ ವಿವಿ ಕಳವಳಕ್ಕೆ BMRCL ಅಧಿಕಾರಿಗಳು ಸ್ಪಂದನೆ ನೀಡಿದ್ದು, ಹೊಸಕೆರೆಹಳ್ಳಿ ನಿಲ್ದಾಣದ ಯೋಜಿತ ಪ್ರವೇಶ/ನಿರ್ಗಮನ ಸ್ಥಳವನ್ನು ಪ್ರಸ್ತುತ ಸ್ಥಳದಿಂದ 18 ಅಡಿ ದೂರದ ಮೈಸೂರು ರಸ್ತೆಯ ಕಡೆಗೆ ಬದಲಾಯಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಪ್ರಸ್ತಾವನೆಗೆ ಪಿಇಎಸ್ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಇದರ ಹೊರತಾಗಿ ಯೋಜನೆಯಲ್ಲಿ ಬೇರೆ ಯಾವುದೇ ಪ್ರಮುಖ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.
Advertisement