
ಬೆಂಗಳೂರು: ಕರ್ನಾಟಕಕ್ಕೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಕೊಡುಗೆ ಅಪಾರವಾಗಿದ್ದು, ಕೆಂಪೇಗೌಡರಂತೆ ಅವರ ಪುತ್ಥಳಿಯನ್ನೂ ನಿರ್ಮಾಣ ಮಾಡಬೇಕು ಎಂದು ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇಂದು ಇಹಲೋಕ ತ್ಯಜಿಸಿದ ಎಸ್ ಎಂ ಕೃಷ್ಣ ಅವರಿಗೆ ಸಂತಾಪ ಸೂಚಿಸಿರುವ ಜನಾರ್ಧನ ರೆಡ್ಡಿ, 'ಕೆಂಪೇಗೌಡರು ಬೆಂಗಳೂರು ಕಟ್ಟಿದ್ರು. ಎಸ್ ಎಂ ಕೃಷ್ಣ ಆಧುನಿಕ ಬೆಂಗಳೂರು ಮಾಡಿದ್ರು. ಕೆಂಪೇಗೌಡರ ಪ್ರತಿಮೆ ಅಂತರಾಷ್ಟ್ರೀಯ ನಿಲ್ದಾಣದ ಬಳಿ ನಿರ್ಮಾಣವಾಗಿದೆ. ಅದೇ ರೀತಿ ಎಸ್ ಎಂ ಕೃಷ್ಣ ಅವ ಪುತ್ಥಳಿ ನಿರ್ಮಿಸಬೇಕು. ಆಗ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ' ಎಂದು ಹೇಳಿದ್ದಾರೆ.
‘ಕರ್ನಾಟದ ಮುಖ್ಯಮಂತ್ರಿಗಳಾಗಿ, ದೇಶದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಮತ್ತು ಭಾರತದ ರಾಜಕಾರಣದಲ್ಲಿ ಇನ್ನೂ ಅನೇಕ ಜವಾಬ್ದಾರಿಗಳನ್ನು ವಹಿಸಿ ಛಾಪು ಮೂಡಿಸಿದ್ದ ಹಾಗೂ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಎಸ್.ಎಂ.ಕೃಷ್ಣ ರವರ ನಿಧನದ ಸುದ್ದಿ ದುಃಖ ತರಿಸಿದೆ.
ಸನ್ಮಾನ್ಯ ಎಸ್.ಎಂ ಕೃಷ್ಣರವರು ರಾಜ್ಯದಲ್ಲಿ ಮೋಡ ಬಿತ್ತನೆ, ಐಟಿ ಕ್ಯಾಪಿಟಲ್ ಗರಿಯ ಹಿಂದಿನ ರೂವಾರಿಗಳಾಗಿ, ಇಸ್ಕಾಂ ರಚನೆಯ ಮೂಲಕ ವಿದ್ಯುತ್ ಕ್ರಾಂತಿ ಸೃಷ್ಟಿಸಿ, ಕೃಷಿ ಡಿಜಿಟಲೀಕರಣದ ಪಿತಾಮಹರಾಗಿ, ಹೊಸ ಕಾರ್ಮಿಕ ನೀತಿ ರೂಪಿಸಿ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಪರಿಚಯಿಸಿದ, ಆಧುನಿಕ ದೂರದೃಷ್ಟಿಯ ನಾಯಕರಾಗಿ ಅಂದಿನ ಇಂದಿನ ಪೀಳಿಗೆಯ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ, ನಾಡಿಗೆ ಅಪಾರ ಕೊಡುಗೆ ನೀಡಿರುವ ಧೀಮಂತ ನಾಯಕರಾಗಿದ್ದಾರೆ.
ನಾನು ಈ ರಾಜ್ಯದ ಪ್ರವಾಸೋದ್ಯಮ ಸಚಿವನಾಗಿದ್ದ ಸಂದರ್ಭದಲ್ಲಿ 500 ವರ್ಷದ ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕ ಮಹೋತ್ಸವದ ಕಾರ್ಯಕ್ರಮವನ್ನು ಹಂಪಿ ಮಾತ್ರವಲ್ಲದೆ ದೆಹಲಿಯಲ್ಲೂ ಕಾರ್ಯಕ್ರಮ ಆಯೋಜಿಸಿದ್ದೆ. ಆ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿದ್ದ ಸನ್ಮಾನ್ಯ ಎಸ್.ಎಂ ಕೃಷ್ಣ ಅವರು ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ನಾಲ್ಕು ಗಂಟೆಗಳ ಕಾಲ ಕಾರ್ಯಕ್ರಮವನ್ನು ನನ್ನೊಟ್ಟಿಗೆ ವೀಕ್ಷಣೆ ಮಾಡಿದ್ದು ಎಂದು ಮರೆಯಲಾಗದು. ಅವರ ರಾಜಕೀಯ ಅನುಭವಗಳನ್ನು ನನ್ನೊಟ್ಟಿಗೆ ಹಂಚಿಕೊಂಡ ಕ್ಷಣಗಳು ಜನ ಸೇವೆಯಲ್ಲಿ ತೊಡಗಿರುವ ನನಗೆ ಮಾರ್ಗದರ್ಶನದ ನುಡಿಗಳಾಗಿವೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ‘ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
Advertisement