ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಬೆಂಬಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಬೆಂಬಲವನ್ನು ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಬೆಂಬಲವನ್ನು ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಹೇಳಿದರು.

ಸೋಮವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಅಮೆರಿಕಾ ವಿಶ್ವ ವಿದ್ಯಾಲಯಗಳ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಇತರೆ ಜನರು ಕಾರ್ಯನಿಮಿತ್ತ ಯುಎಸ್‍ಗೆ ತೆರಳುತ್ತಿದ್ದಾರೆ. ಅವರಿಗೆ ವೀಸಾ ಹಾಗೂ ಇತರೆ ಔಪಚಾರಿಕತೆಗಳಿಗೆ ಅನುಕೂಲವಾಗುವಂತೆ ಇಲ್ಲಿಯೇ ಯುಎಸ್ ರಾಯಭಾರಿ ಕಚೇರಿ ತೆರೆಯಲಾಗುತ್ತದೆ ಎಂದು ಹೇಳಿದರು.

ಯುಎಸ್ ಟ್ರೇಡ್ ಮಿಷನ್‍ನ ಪ್ರತಿನಿಧಿಗಳು ಫೆ.12 ರಿಂದ ಫೆ.20ರವರೆಗೆ ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಮೆರಿಕಾದ ಶಿಕ್ಷಣ ಸಂಸ್ಥೆಗಳನ್ನು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕಿಸಲು ಮತ್ತು ವಿದ್ಯಾರ್ಥಿಗಳು ಪರಸ್ಪರ ಲಾಭದಾಯಕ ಸಹಯೋಗವನ್ನು ಮುನ್ನಡೆಸಲು ಅವರು ಪ್ರಯತ್ನಿಸುತ್ತಾರೆ ಎಂದು ತಿಳಿಸಿದರು.

ಯುಎಸ್ ಟ್ರೇಡ್ ಮಿಷನ್‍ನ ಪ್ರತಿನಿಧಿಗಳ ನಿಯೋಗವು ಫೆ.14 ರಿಂದ ಫೆ15ರವರೆಗೆ ಮಂಗಳೂರು ಮತ್ತು ಮಣಿಪಾಲಕ್ಕೆ ತೆರಳುತ್ತದೆ. ಫೆ.16 ಮತ್ತು ಫೆ.17 ಕೊಚ್ಚಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಫೆ.19 ಮತ್ತು ಫೆ.20ರಂದು ಕೊಯಮತ್ತೂರಿನಲ್ಲಿ ವಿದ್ಯಾರ್ಥಿಗಳನ್ನು ನಿಯೋಗವು ಭೇಟಿ ಮಾಡಲಿದ.

ನಿಯೋಗವು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ, ಟೆಕ್ಸಾಸ್-ಸ್ಯಾನ್ ಆಂಟೋನಿಯೊ ವಿಶ್ವವಿದ್ಯಾಲಯ, ಅರಿಜೋನಾ ಸ್ಟೇಟ್ ಯೂನಿವರ್ಸಿಟಿ ಮತ್ತು ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಹಿರಿಯ ಪ್ರತಿನಿಧಿಗಳನ್ನು ಒಳಗೊಂಡಿದೆ. ಮಾ.11 ರಂದು ಚೆನ್ನೈಗೆ ಭೇಟಿ ನೀಡಲಿದೆ. ಸುಸ್ಥಿರ ಮತ್ತು ಸುರಕ್ಷಿತ ಶುದ್ಧ ಇಂಧನ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಕಂಪೆನಿಗಳು ಮಿಷನ್‍ನಲ್ಲಿ ಭಾಗವಹಿಸುತ್ತವೆ ಎಂದು ಮಾಹಿತಿ ನೀಡಿದರು.

ಶಿಕ್ಷಣ ಮೇಳ ಉದ್ಘಾಟಿಸಿದ ಸಚಿವ ಸುಧಾಕರ್
ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಚೆನ್ನೈನ ಯುಎಸ್ ಕಾನ್ಸುಲ್ ಜನರಲ್ ಹಮ್ಮಿಕೊಂಡಿರುವ ಎಜುಕೇಶನ್ ಟ್ರೇಡ್ ಮಿಷನ್‌ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸೋಮವಾರ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಉನ್ನತ ಶಿಕ್ಷಣದಲ್ಲಿ ಅಮೆರಿಕ ವಿಶ್ವವಿದ್ಯಾಲಯಗಳೊಂದಿಗೆ ಅಂತಾರಾಷ್ಟ್ರೀಯ ಪಾಲುದಾರಿಕೆ ಮತ್ತು ಸಹಯೋಗದ ಶಿಕ್ಷಣಕ್ಕೆ ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲು ಸರ್ಕಾರವು ಮುಕ್ತವಾಗಿದೆ, ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿ ಅಧ್ಯಯನ ಮಾಡುವುದು ಕೆಲವರಿಗೆ ಆರ್ಥಿಕವಾಗಿ ಸಾಧ್ಯವಾಗುವುದಿಲ್ಲ, ಹಾಗಾಗಿ ಅಮೆರಿಕ ಮತ್ತು ಕರ್ನಾಟಕದ ಸರ್ಕಾರಿ ವಿಶ್ವವಿದ್ಯಾಲಯಗಳು ಸಂಯುಕ್ತವಾಗಿ ತರಗತಿಗಳನ್ನು ನಡೆಸುವಂತಾಗಬೇಕು ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಭರವಸೆ ನೀಡಿದರು.

ಅಮೆರಿಕದ 18 ವಿಶ್ವವಿದ್ಯಾಲಯದ ಪ್ರತಿನಿಧಿಗಳು ಯುಎಸ್ ಉನ್ನತ ಶಿಕ್ಷಣ ಮೇಳದಲ್ಲಿ ಪಾಲ್ಗೊಂಡಿದ್ದರು. ಚೆನ್ನೈನ ಯುಎಸ್ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಹಾಡ್ಜಸ್ ಕೌನ್ಸಿಲರ್ ಫಾರ್ ಕಮರ್ಷಿಯಲ್ ಅಫೀಸರ್ ಪ್ರೊ.ಅರುಣ್ ತಡಗೋಪಂ, ಪ್ರೊ. ಕೆಎನ್‌ಎಸ್ ಆಚಾರ್ಯ ಹಾಗೂ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶ್ರೀಕರ್ ಸೇರಿ ಹಲವರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com