ಗೃಹಜ್ಯೋತಿ ಯೋಜನೆ ನಿಯಮದಲ್ಲಿ ಬದಲಾವಣೆ: ಮಾಹಿತಿ ಕೋರಿ ಸಂಪರ್ಕಿಸುವವರ ಸಂಖ್ಯೆ ಹೆಚ್ಚಳ!

ಗೃಹಜ್ಯೋತಿ ಯೋಜನೆ ನಿಯಮದಲ್ಲಿ ಸರ್ಕಾರ ಬದಲಾವಣೆ ತಂದ ಬೆನ್ನಲ್ಲೇ ಯೋಜನೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಗಿಂತಲೂ ಮಾಹಿತಿ ಕೋರಿ ಅಧಿಕಾರಿಗಳ ಸಂಪರ್ಕಿಸುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗೃಹಜ್ಯೋತಿ ಯೋಜನೆ ನಿಯಮದಲ್ಲಿ ಸರ್ಕಾರ ಬದಲಾವಣೆ ತಂದ ಬೆನ್ನಲ್ಲೇ ಯೋಜನೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಗಿಂತಲೂ ಮಾಹಿತಿ ಕೋರಿ ಅಧಿಕಾರಿಗಳ ಸಂಪರ್ಕಿಸುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಕಳೆದ ಸಂಪುಟ ಸಭೆಯಲ್ಲಿ ಗೃಹಜ್ಯೋತಿ ಯೋಜನೆ ನಿಯಮದಲ್ಲಿ ಬದಲಾವಣೆಗಳನ್ನು ಸರ್ಕಾರ ಘೋಷಣೆ ಮಾಡಿತ್ತು. ಮಾಸಿಕ 48 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವವರಿಗೆ 'ಗೃಹಜ್ಯೋತಿ' ಯೋಜನೆಯಡಿ ಶೇ. 10ರಷ್ಟು ಹೆಚ್ಚುವರಿ ವಿದ್ಯುತ್‌ ಉಚಿತ ನೀಡುವ ಬದಲಿಗೆ 10 ಯೂನಿಟ್‌ ಹೆಚ್ಚುವರಿ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ತಿಳಿಸಿತ್ತು.

ಯೋಜನೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಮಿತಿಯಲ್ಲಿಯೇ ಸುಮಾರು 25 ಲಕ್ಷ ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದು, ಉಳಿದವು ಎಸ್ಕಾಂ ಮಿತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಧನ ಇಲಾಖೆಯ ದಾಖಲೆಗಳ ಪ್ರಕಾರ, ಜನವರಿ 15 ರವರೆಗೆ 1,65,48,007 ಜನರು ಯೋಜನೆಗೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 68,41,494 ಜನರು ಬೆಸ್ಕಾಂ ವ್ಯಾಪ್ತಿಯಲ್ಲಿದ್ದಾರೆಂದು ತಿಳಿದುಬಂದಿದೆ.

ಯೋಜನೆಯು ಸಾಕಷ್ಟು ಪ್ರಯೋಜನ ನೀಡುತ್ತಿದೆ. ಇಲಾಖೆಯು ಇಂಧನ ಉಳಿತಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಯೋಜನೆಯ ಲಾಭ ಪಡೆಯಲು ಜನರು ವಿದ್ಯುತ್ ಬಳಕೆ ಕಡಿಮೆ ಮಾಡುತ್ತಿದ್ದಾರೆ. ಇದು ದೀರ್ಘಾವಧಿಯಲ್ಲಿ ಇಂಧನ ಉಳಿತಾಯ ಮಾಡಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ, ಅಗತ್ಯಕ್ಕೆ ಅನುಗುಣವಾಗಿ, ಯೋಜನೆಯಲ್ಲಿ ಪರಿಷ್ಕರಣೆಗಳನ್ನು ಮಾಡಲಾಗುತ್ತದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಗ್ರಾಹಕರಿಗೆ ನೀಡುತ್ತಿರುವ ಸಬ್ಸಿಡಿ ಮತ್ತು ಶೂನ್ಯ ಬಿಲ್‌ಗಳನ್ನು ಸರ್ಕಾರವು ನಿಯಮಿತವಾಗಿ ಮರುಪಾವತಿಸುತ್ತಿದೆ. ಎಸ್ಕಾಮ್ ಕಳುಹಿಸುವ ಬಿಲ್ ಗಳನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com