ಬೆಂಗಳೂರು: ನಕಲಿ ವಿಡಿಯೋ ಸೃಷ್ಟಿಸಿ ರಾಜಕಾರಣಿಗಳು ಮತ್ತು ಉದ್ಯಮಿಗಳಿಂದ ಹಣ ವಸೂಲಿಗೆ ಯತ್ನಿಸುತ್ತಿದ್ದ ಇಬ್ಬರನ್ನು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೈಸೂರು ನಿವಾಸಿಗಳಾದ ಸಂತೋಷ್ ಅಲಿಯಾಸ್ ಸುರೇಶ್ ರಂಜನ್ ಮತ್ತು ಪುಟ್ಟರಾಜು ಎಂದು ಗುರುತಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರೆದಿದೆ.
ಆರೋಪಿಗಳು ಗಣ್ಯ ವ್ಯಕ್ತಿಗಳ ಮೊಬೈಲ್ ನಂಬರ್ ಪಡೆಯುತ್ತಿದ್ದರು. ನಂತರ ಅವರ ಪ್ರವಾಸ, ಸಭೆ- ಸಮಾರಂಭ, ಉಳಿದುಕೊಳ್ಳುತ್ತಿದ್ದ ಐಷಾರಾಮಿ ಹೋಟೆಲ್ಗಳ ರೂಂ ಬುಕ್ಕಿಂಗ್, ಚೆಕ್ಇನ್ ಹಾಗೂ ಚೆಕ್ಔಟ್ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರು. ಸಭೆ ಸಮಾರಂಭಗಳಲ್ಲಿ ಗಣ್ಯ ವ್ಯಕ್ತಿಗಳಿಗೆ ಯುವತಿಯರನ್ನು ಪರಿಚಯ ಮಾಡಿಕೊಡುತ್ತಿದ್ದರು. ಗಣ್ಯ ವ್ಯಕ್ತಿಗಳು ಯುವತಿಯರ ಜತೆ ಆಪ್ತ ಸಂಭಾಷಣೆಯಲ್ಲಿ ತೊಡಗಿದ್ದಾಗ ಅವರ ಫೋಟೊ ತೆಗೆದುಕೊಳ್ಳುತ್ತಿದ್ದರು ಮತ್ತು ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದರು.
ಗಣ್ಯ ವ್ಯಕ್ತಿಗಳು ತಂಗುತ್ತಿದ್ದ ಹೋಟೆಲ್ನ ರೂಂಗೆ ಆರೋಪಿಗಳು ಯುವತಿಯರನ್ನು ಕಳುಹಿಸುತ್ತಿದ್ದರು. ಆ ರೂಂಗಳಲ್ಲಿ ಮೊದಲೇ ರಹಸ್ಯ ಕ್ಯಾಮೆರಾ ಇಟ್ಟು, ಗಣ್ಯ ವ್ಯಕ್ತಿಗಳು ಯುವತಿಯರ ಜತೆ ಏಕಾಂತದಲ್ಲಿದ್ದಾಗ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು.
ಹಣ ಕೊಡದಿದ್ದಾಗ ಜಾಲತಾಣದಲ್ಲಿ ಹಾಕುವುದಾಗಿ ಮತ್ತು ಪೊಲೀಸರಿಗೆ ಕೊಡುವುದಾಗಿ ಬೆದರಿಸುತ್ತಿದ್ದರು. ಈ ಸಂಬಂಧ ಹರೀಶ್ಗೌಡ ಅವರು ಜೂನ್ 10ರಂದು ದೂರು ಕೊಟ್ಟಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಮೈಸೂರಿನ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ. ಸುಲಿಗೆ ಕರೆ ಮಾಡಲು ಬಳಸುತ್ತಿದ್ದ ಫೋನ್ ನಂಬರ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ಆರೋಪಿಗಳಿಂದ ಪೆನ್ ಡ್ರೈವ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇಬ್ಬರ ಪೈಕಿ ಓರ್ವ ಆರೋಪಿ ಮೈಸೂರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ವೀಡಿಯೊಗಳನ್ನು ಚಿತ್ರೀಕರಿಸಲು ಮತ್ತು ಜನರಿಗೆ ಬೆದರಿಕೆ ಹಾಕಲು ಈ ಲೈಂಗಿಕ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಅವರು ಮಾತನಾಡಿ, ಪ್ರಕರಣದಲ್ಲಿ ನಾನೊಬ್ಬನೇ ಸಂತ್ರಸ್ತ ವ್ಯಕ್ತಿಯಲ್ಲ. ಕ್ಷೇತ್ರದ ಇಬ್ಬರು ವ್ಯಕ್ತಿಗಳು ಕೂಡ ನನ್ನ ಬಳಿ ತಮ್ಮ ಅಳಲು ತೋಡಿಕೊಂಡಿದ್ದರು. ಹೀಗಾಗಿಯೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹೇಳಿದ್ದಾರೆ.
Advertisement