ಬೆಂಗಳೂರು: ಅಗತ್ಯ ಬಿದ್ದರೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ಮಾರ್ಚ್ 1 ರಂದು ಬ್ರೂಕ್ಫೀಲ್ಡ್ನ ಜನಪ್ರಿಯ ಉಪಾಹಾರ ಗೃಹದಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ಜನರು ಗಾಯಗೊಂಡ ಬಗ್ಗೆ ಮಾತನಾಡಿದ ಅವರು, ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಎನ್ಐಎ ತನಿಖೆಗೆ ಬಿಜೆಪಿ ಆಗ್ರಹದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾವು ಚಿಂತನೆ ನಡೆಸುತ್ತೇವೆ. ಇದೀಗ ತನಿಖೆ ಆರಂಭವಾಗಿದೆ. ಇದುವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ಎನ್ಐಎ ತನಿಖೆ ಅಗತ್ಯವಿದ್ದಲ್ಲಿ ನಾವು ಆ ಬಗ್ಗೆ ಯೋಚಿಸುತ್ತೇವೆ ಎಂದರು.
ಬ್ರಾಂಡ್ ಬೆಂಗಳೂರು ಎನ್ನುವ ಬದಲು ಬಾಂಬ್ ಬೆಂಗಳೂರು ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿ ಆಡಳಿತಾವಧಿಯಲ್ಲಿ ನಾಲ್ಕು ಬಾಂಬ್ ಸ್ಫೋಟಗಳು ನಡೆದಿದ್ದವು. ಆಗ ಅದನ್ನು ಏನೆಂದು ಕರೆಯಬೇಕು? ಮಂಗಳೂರು ಕುಕ್ಕರ್ ಸ್ಫೋಟ ನಡೆದಾಗ ಆಡಳಿತ ನಡೆಸುತ್ತಿದ್ದವರು ಯಾರು? ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು ಸ್ಫೋಟ ಸಂಭವಿಸಿದೆ ಎಂದು ಕಿಡಿಕಾರಿದರು.
ಆಗ ಆಳುತ್ತಿದ್ದವರು ಯಾರು? ಎನ್ಐಎ, ಐಬಿ ಉಸ್ತುವಾರಿ ಯಾರು? ಇದು ಅವರ ವೈಫಲ್ಯವಲ್ಲವೇ? ಬಾಂಬ್ ಸ್ಫೋಟಕ್ಕೆ ನಾನು ಬೆಂಬಲ ನೀಡುತ್ತಿಲ್ಲ. ನಾನು ಇದನ್ನು ಖಂಡಿಸುತ್ತೇನೆ. ಆದರೆ, ಬಿಜೆಪಿ ಇದರಲ್ಲಿ ರಾಜಕೀಯ ಮಾಡಬಾರದು ಎಂದರು.
ಬಾಂಬ್ ಸ್ಫೋಟಗಳು ಎಂದಿಗೂ ಹಾಸ್ಯಾಸ್ಪದ ಘಟನೆಗಳಲ್ಲ. ಸರ್ಕಾರಗಳು ಇದನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಿವೆ. ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆ ಬಹಳ ಮುಖ್ಯ ಎಂದು ಅವರು ಹೇಳಿದರು.
Advertisement