ನಗರದಲ್ಲಿ ನೀರಿನ ಅಭಾವ: ಕಟ್ಟಣ ನಿರ್ಮಾಣ ಕಾಮಗಾರಿಗೆ ಸಂಸ್ಕರಿಸಿದ ನೀರು ಬಳಕೆಗೆ BWSSB ನಿರ್ಧಾರ!

ನಗರದಲ್ಲಿ ನೀರಿನ ಅಭಾವ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ಸೂಚನೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ನೀರಿನ ಅಭಾವ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನು ಬಳಕೆ ಮಾಡುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ಸೂಚನೆ ನೀಡಿದ್ದಾರೆ.

ಕಟ್ಟಡ ಮಾಲೀಕರು, ಗುತ್ತಿಗೆದಾರರೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಬೆಂಗಳೂರಿನಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಬಗ್ಗೆ ವಿವರಿಸಿದರು.

ನಗರದಲ್ಲಿ ಎಲ್ಲಾ ಕಟ್ಟಡ ನಿರ್ಮಾಣ ಕಾಮಗಾರಿ ಕಾರ್ಯಗಳಿಗೆ ಅದರಲ್ಲೂ 20 ಸಾವಿರ ಚದರ ಅಡಿ ಮೇಲ್ಪಟ್ಟು ಕಟ್ಟಡ ನಿರ್ಮಿಸುತ್ತಿರುವ ಕಟ್ಟಡ ಮಾಲೀಕರು, ಗುತ್ತಿಗೆದಾರರು ಕಡ್ಡಾಯವಾಗಿ ಸಂಸ್ಕರಿಸಿದ ನೀರನ್ನೇ ಬಳಸುವಂತೆ ಸೂಚನೆ ನೀಡಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಶುದ್ಧೀಕರಿಸಿದ ಪರಿಸರ ಸ್ನೇಹಿ ನೀರನ್ನು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬಳಸುತ್ತಿದ್ದು ನಮ್ಮಲ್ಲಿಯೂ ಇದನ್ನು ಬಳಸುವುದು ಒಳ್ಳೆಯದು’ ಎಂದು ಹೇಳಿದರು. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕಟ್ಟಡ ಮಾಲೀಕರು ಸಮ್ಮತಿಸಿದರು.

ಇದೇ ವೇಳೆ ಕಟ್ಟಡ ಪ್ರದೇಶದಲ್ಲಿರುವ ಸುಸ್ಥಿತಿಯ ಕೊಳವೆಬಾವಿಗಳನ್ನು ಮಂಡಳಿಯಿಂದ ನೀರು ಸರಬರಾಜು ಮಾಡಲು ನೀಡುವಂತೆ ಮನವಿ ಮಾಡಿದರು. ಮಾಲೀಕರು ಇದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದರು.

ಸಂಗ್ರಹ ಚಿತ್ರ
ಬೋರ್‌ವೆಲ್‌ ಕೊರೆಯುವ ಮುನ್ನ ಅನುಮತಿ ಕಡ್ಡಾಯ: BWSSB

ಬಲ್ಕ್‌ ಬಳಕೆದಾರರಿಗೆ ಶೇ 20ರಷ್ಟು ಕಾವೇರಿ ನೀರು ಕಡಿತ

ಜಲಮಂಡಳಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಪರ್ಕ ಪಡೆದಿರುವವರಿಗೆ (ಬಲ್ಕ್‌ ಬಳಕೆದಾರರು) ಕಾವೇರಿ ನೀರಿನ ಸರಬರಾಜಿನಲ್ಲಿ ಶೇ 20ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದೆ.

ರಾಮ್‌ ಪ್ರಸಾತ್‌ ಮನೋಹರ್‌ ಅವರು ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸುವಂತಹ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಂಗಳವಾರ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನವನ್ನು ತಿಳಿಸಿದರು.

ರೈಲ್ವೆ, ಎಚ್ಎಎಲ್, ವಾಯುಪಡೆ, ಡಿಫೆನ್ಸ್, ಸಿಆರ್‌ಪಿಎಫ್, ಬಯೋಕಾನ್, ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ಹೆಚ್ಚು ನೀರು ಬಳಸುವಂತಹ ಸಂಸ್ಥೆಗಳು ತಮ್ಮ ಕ್ಯಾಂಪಸ್‌ನಲ್ಲಿ ನೀರಿನ ಪ್ರಾಮುಖ್ಯ, ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು. ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 1.40 ಕೋಟಿ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುವುದು ಸವಾಲಾಗಿದೆ. ಹೀಗಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಗರದಲ್ಲಿ ಮೂರು ಲಕ್ಷ ಬಲ್ಕ್‌ ಬಳಕೆದಾರರಿದ್ದು, ಶೇ 95ರಿಂದ 100ರಷ್ಟು ಕಾವೇರಿ ನೀರನ್ನು ಜಲಮಂಡಳಿ ವತಿಯಿಂದ ಪೂರೈಸಲಾಗುತ್ತಿದೆ. ಇದರಲ್ಲಿ ಶೇ 20ರಷ್ಟನ್ನು ಕಡಿತಗೊಳಿಸಲಾಗುತ್ತದೆ. ಈ ಕಡಿತಗೊಳಿಸುವ ನೀರನ್ನು ಕೊಳೆಗೇರಿ, ಜನನಿಬಿಡ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾವೇರಿ-5ನೇ ಹಂತದ ಯೋಜನೆಯಿಂದ ಮೇ 15ರೊಳಗೆ ನೀರು ಸರಬರಾಜು ಆಗಲಿದೆ. ಅಲ್ಲಿಯವರೆಗೆ ನಮ್ಮೊಂದಿಗೆ ಸಹಕರಿಸಿ. ಕುಡಿಯಲು ಹೊರತುಪಡಿಸಿದಂತೆ ಇತರೆ ಉದ್ದೇಶಗಳಿಗೆ ಸಂಸ್ಕರಿಸಿದ ನೀರನ್ನು ಬಳಸಿ ಮನವಿ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com