ಬೆಂಗಳೂರು: ರೈಲುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಮೂವರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮೊಹಮ್ಮದ್ ಶೌಕತ್ ಅಲಿ, ಮೊಹಮ್ಮದ್ ಸತ್ತಾರ್ ಮತ್ತು ಮೊಹಮ್ಮದ್ ಅವದ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು 3 ತಿಂಗಳ ಹಿಂದೆ 120 ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದರು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಆರ್ಪಿ ಅಧೀಕ್ಷಕಿ ಎಸ್ಕೆ ಸೌಮ್ಯಲತಾ, ಕಳೆದ ವರ್ಷ ಡಿಸೆಂಬರ್ 17 ರಂದು ಜೋಧ್ಪುರ-ಬೆಂಗಳೂರು ಎಕ್ಸ್ಪ್ರೆಸ್ನಲ್ಲಿ ಘಟನೆ ನಡೆದಿತ್ತು. ಬಳಿಕ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ರಾಜಸ್ಥಾನದ ವೃದ್ಧ ದಂಪತಿ, ಜೋಧಪುರದಿಂದ ಬೆಂಗಳೂರಿಗೆ ರೈಲಿನಲ್ಲಿ 2023ರ ಡಿಸೆಂಬರ್ 17ರಂದು ಬರುತ್ತಿದ್ದರು. ಇದೇ ರೈಲು ಹತ್ತಿದ್ದ ಆರೋಪಿಗಳು, ದಂಪತಿಯನ್ನು ಪರಿಚಯ ಮಾಡಿಕೊಂಡಿದ್ದರು. ಆತ್ಮಿಯವಾಗಿ ಮಾತನಾಡಿದ್ದರು. ಪ್ರಯಾಣದ ವೇಳೆಯಲ್ಲಿ, ಮತ್ತು ಬರುವ ಔಷಧಿ ಬೆರೆಸಿದ್ದ ಬಾದಾಮಿ ಹಾಲನ್ನು ದಂಪತಿಗೆ ಕುಡಿಸಿದ್ದರು.
ಹಾಲು ಕುಡಿದಿದ್ದ ದಂಪತಿ ಪ್ರಜ್ಞೆ ತಪ್ಪಿದ್ದರು. ನಂತರ, ದಂಪತಿ ಬಳಿಯಿದ್ದ ರೂ.20 ಸಾವಿರ ನಗದು ಹಾಗೂ 120 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದರು. ಈ ಬಗ್ಗೆ ದಂಪತಿ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಅರಸೀಕೆರೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 328, 379 ಮತ್ತು 34 ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ ಮುರ್ಡೇಶ್ವರ-ಬೆಂಗಳೂರು ಎಕ್ಸ್ಪ್ರೆಸ್ನಲ್ಲಿ ಎಸಿ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಂದ 38 ಲಕ್ಷ ರೂಪಾಯಿ ಮೌಲ್ಯದ 402 ಗ್ರಾಂ ಚಿನ್ನ ಕದ್ದ ಇಬ್ಬರು ಖತರ್ನಾಕ್ ಕಳ್ಳಿಯರನ್ನು ರೈಲ್ವೇ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಸಂಧ್ಯಾ ಹಾಗೂ ಗಾಯತ್ರಿ ಎಂದು ಗುರ್ತಿಸಲಾಗಿದೆ. ಸಮೀಮ್ ಕುನಿಲ್ ಎಂಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಇವರ ಗಮನವನ್ನು ಬೇರೆಡೆಗೆ ಸೆಳೆದಿದ್ದ ಕಳ್ಳಿಯರು, ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕದ್ದಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಲನ್ನು ಬಂಧಿಸಿದ್ದಾರೆ. ಇವರಿಬ್ಬರ ವಿರುದ್ಧ ವಿವಿಧ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
Advertisement