ಬೆಂಗಳೂರು: ನಗರ ಪೊಲೀಸರು ಚುನಾವಣಾ ಕರ್ತವ್ಯದಲ್ಲಿ ಬಿಝಿಯಾಗುತ್ತಿದ್ದಂತೆಯೇ ಇತ್ತ ಕಳ್ಳರು ನಗರದಲ್ಲಿ ಕೈಚಳಕ ಶುರು ಮಾಡಿದ್ದಾರೆ. ನಗರದಲ್ಲಿ ಒಂದೇ ದಿನ 9 ಮನೆಗಳಲ್ಲಿ ದರೋಡೆ ನಡೆದಿರುವುದು ವರದಿಯಾಗಿದೆ.
ಮೇ 4 ರಂದು ಕೋರಮಂಗಲದಲ್ಲಿ ಒಂದೇ ರಾತ್ರಿಯಲ್ಲಿ ಒಂಬತ್ತು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಇಲ್ಲಿನ ನಿವಾಸಿಗಳು ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದರಿಂದ ರಾತ್ರಿ ಗಸ್ತು ಕಡಿಮೆಯಾಗಿದೆ. ಇದರಿಂದ ಕಳ್ಳರು ನಿರ್ಭಯದಿಂದ ಓಡಾಡಲು ಹಾಗೂ ಕಳ್ಳತನ ಮಾಡುವಂತೆ ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋರಮಂಗಲ 1ನೇ ಬ್ಲಾಕ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪದ್ಮಶ್ರೀ ಬಲರಾಮ್ ಮಾತನಾಡಿ, ಬೆಳಗಿನ ಜಾವ 1 ರಿಂದ 4.30 ರ ನಡುವೆ ಇಬ್ಬರು ವ್ಯಕ್ತಿಗಳು ಮನೆಗಳಿಗೆ ನುಗ್ಗಿ ದರೋಡೆ ಮಾಡಿದ್ದಾರೆ. ಕಳ್ಳರ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಕಂಡುಬಂದಿದೆ. ಒಬ್ಬ ಮನೆಯ ಕಾಂಪೌಂಡ್ ಗೋಡೆಯನ್ನು ಜಿಗಿಯುತ್ತಿರುವುದು ಹಾಗೂ ಮತ್ತೊಬ್ಬ ಕಾವಲು ಕಾಯುತ್ತಿರುವ ದೃಶ್ಯಾವಳಿಗಳು ಕಂಡು ಬಂದಿದೆ.
ಕಾಂಪೌಂಡ್ ಗೋಡೆ ಹಾರಿದ ಕಳ್ಳ, ನಂತರ ಶೂಗಳನ್ನು ನೋಡಿ, ಅವುಗಳನ್ನು ಕದಿಯುತ್ತಾನೆ. ಪ್ರತಿ ಮನೆಯಿಂದ ಐದರಿಂದ ಆರು ಜೋಡಿ ದುಬಾರಿ ಬೆಲೆಯ ಸ್ಪೋರ್ಟ್ಸ್ ಶೂಗಳು ಕಳ್ಳತನವಾಗಿವೆ. ಅಮೆರಿಕಾದಿಂದ ತಂದಿದ್ದ 30,000 ರೂಪಾಯಿ ಬೆಲೆ ಬಾಳುವ ಪಾದರಕ್ಷೆಗಳೂ ಕಳ್ಳತನವಾಗಿವೆ. ಮನೆಯೊಂದರಲ್ಲಿದ್ದ ಎರಡು ಸೈಕಲ್ಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಈ ಸಂಬಂಧ ಪೊಲೀಸರಿಗೆ ಮತ್ತು ಸ್ಥಳೀಯ ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ದೂರು ನೀಡಿದ್ದೇವೆ, ಅವರು ಹೆಚ್ಚುವರಿ 25 ಸಿಸಿಟಿವಿ ಕ್ಯಾಮೆರಾಗಳನ್ನು ವ್ಯವಸ್ಥೆಗೊಳಿಸುವುದಾಗಿ ಮತ್ತು ಪೊಲೀಸ್ ಗಸ್ತು ಹೆಚ್ಚಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕೋರಮಂಗಲ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಸಾಮಾನ್ಯವಾಗಿ ಈ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಾಗಿಯೇ ಇರುತ್ತದೆ, ಆದರೆ ಕೆಲವು ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದ ಕಾರಣ ಕಳ್ಳರು ಕೈಚಳಕ ತೋರಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆ ಮುಗಿದಿದ್ದು, ಈ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಲು ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
Advertisement