![ಸಾಂದರ್ಭಿಕ ಚಿತ್ರ](http://media.assettype.com/kannadaprabha%2Fimport%2F2021%2F9%2F27%2Foriginal%2FCasual_Images2.jpg?w=480&auto=format%2Ccompress&fit=max)
ಬೆಂಗಳೂರು: ಇತ್ತೀಚೆಗೆ ನಡೆದ ಹೇಮಂತ್ ಗೌಡ ಕೊಲೆ ಪ್ರಕರಣದ ಎ2 ಆರೋಪಿ ರೌಡಿಶೀಟರ್ ಶ್ರೀನಿವಾಸ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ರಾಜಾನುಕುಂಟೆ ಸಮೀಪದ ಶ್ರೀರಾಮನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಖಚಿತ ಮಾಹಿತಿ ಮೆರೆಗೆ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾದ ಶ್ರೀನಿವಾಸ್ ಬಂಧನಕ್ಕೆ ತೆರಳಿದ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆ ಯತ್ನ ಮಾಡಿದಾಗ ಆತ್ಮರಕ್ಷಣೆಗಾಗಿ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಡಿವೈಎಸ್ಪಿ ಪಿ.ರವಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಆರೋಪಿಯನ್ನು ಬಾಶೆಟ್ಟಿಹಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನವೋದಯ ಶಾಲೆ ಸಮೀಪ ಮೇ 11 ರಂದು ಹುಸ್ಕೂರು ನಿವಾಸಿ ಹೇಮಂತ್ ಗೌಡ ಎಂಬಾತನನ್ನು ಮೇಡಹಳ್ಳಿಯ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಹಾಗೂ ಆತನ ಸಹಚರರು ಭೀಕರವಾಗಿ ಹತ್ಯೆ ಮಾಡಿದ್ದರು. ಹೇಮಂತ್ ಗೌಡನನ್ನು ಹತ್ಯೆ ಮಾಡಿ ವಾಹನವೊಂದರಲ್ಲಿ ಶವದ ಜೊತೆ ಆರೋಪಿಗಳು ರೌಂಡ್ಸ್ ಹಾಕಿದ್ದರು.
ಮೇ. 11ರಂದು ಹೇಮಂತ್ ಗೌಡ ಎಂಬ ಯುವಕನನ್ನು ನರಸಿಂಹಮೂರ್ತಿ ಅಲಿಯಾಸ್ ಮಿಟ್ಟಿ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅವರು ಈ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡು, ಕೊಲೆ ಪ್ರಕರಣದ ಪ್ರಮುಖ ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆನನ್ನ ಇತ್ತೀಚೆಗೆ ಬಂಧಿಸಿದ್ದರು.
ಮತ್ತೊಬ್ಬ ಪ್ರಮುಖ ಆರೋಪಿ ಶ್ರೀನಿವಾಸ್ ರಾಜಾನುಕುಂಟೆಯ ಶ್ರೀರಾಮನಹಳ್ಳಿ ಗೇಟ್ ಬಳಿ ಇರುವ ಕುರಿತು ಮಾಹಿತಿ ಪಡೆದ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದ ತಂಡ ಕೂಡಲೇ ಆತನನ್ನು ಬಂಧನ ಮಾಡಲು ಸ್ಥಳಕ್ಕೆ ತೆರಳದ್ದರು.
ಆರೋಪಿ ಶ್ರೀರಾಮನಹಳ್ಳಿ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದನು, ಈ ವೇಳೆ ಪೊಲೀಸರು ಆತನನ್ನು ಬಂಧಿಸಲು ಹೋದಾಗ ಆರೋಪಿ ಕಲ್ಲು ತೆಗೆದುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಲ್ಲದೇ, ಹೆಡ್ ಕಾನ್ಸ್ಸ್ಟೇಬಲ್ ಚಂದ್ರಶೇಖರ್ ಎಂಬುವವರಿಗೆ ಚಾಕುವಿನಿಂದ ಕೈಗೆ ಗಾಯಗೊಳಿಸಿ ಕೊಲೆ ಮಾಡಲು ಮುಂದಾಗಿದ್ದಾನೆ. ಬಳಿಕ ಇನ್ಸ್ ಪೆಕ್ಟರ್ ಸಾದಿಕ್ ಪಾಷ ಅವರು ಏರ್ ಫೈರ್ ಮಾಡಿ ಆರೋಪಿಗೆ ಎಚ್ಚರಿಕೆ ನೀಡಿದರೂ ಸಹ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ. ಬಳಿಕ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾಹಿತಿ ನೀಡಿದ್ದಾರೆ.
ಆರೋಪಿ ಶ್ರೀನಿವಾಸ್ಹಾಗೂ ಗಾಯಗೊಂಡ ಹೆಡ್ ಕಾನ್ಸ್ಸ್ಟೇಬಲ್ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಶ್ರೀನಿವಾಸ್ಎ2 ಆರೋಪಿಯಾಗಿದ್ದಾನೆ. ಈತನ ಮೇಲೆ ರೌಡಿಶೀಟರ್ ಕೂಡ ಇದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
Advertisement