
ಬೆಂಗಳೂರು: ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ, ಜಾತಿ ನಿಂದನೆ ಆರೋಪ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಬಿಜೆಪಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರು ಪ್ರತಿನಿಧಿಸುತ್ತಿರುವ ಆರ್ಆರ್ ನಗರದ ಕಾಮಗಾರಿ ಸಂಬಂಧ ಬಿಬಿಎಂಪಿ ತನಿಖೆಗೆ ಆದೇಶಿಸಿದೆ.
ಆರ್ಆರ್ ನಗರ ಕ್ಷೇತ್ರದಲ್ಲಿ 2020 ರಿಂದ 2022ರ ವರೆಗೆ ನಡೆದ ಕಾಮಗಾರಿಗಳ ತನಿಖೆಗೆ ಪಾಲಿಕೆ ಆದೇಶ ಹೊರಡಿಸಿದ್ದು, 2020 ಸೆಪ್ಟೆಂಬರ್ನಿಂದ 2022 ರ ಜುಲೈ 19ರ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಅವ್ಯವಹಾರ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಖಾಸಗಿ ವಾಹಿನ ವರದಿ ಮಾಡಿದ್ದು, 'ಕಾಮಗಾರಿ ನಡೆಸದೇ ಈ ಅವಧಿಯಲ್ಲಿ ಬಿಲ್ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಇದೀಗ ಬಿಬಿಎಂಪಿ ಕಂದಾಯ ವಿಶೇಷ ಮುನೀಶ್ ಮೌದ್ಗಿಲ್ ನೇತೃತ್ವದಲ್ಲಿ ತನಿಖೆಗೆ ಸಮಿತಿ ರಚಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೆಪ್ಟೆಂಬರ್ 23 ರಂದೇ ತನಿಖೆಗೆ ಆದೇಶ ಹೊರಡಿಸಿದ್ದರು. ಅದರ ಆಧಾರದಲ್ಲಿ ಸಮಿತಿ ರಚನೆ ಮಾಡಲಾಗಿದೆ. ತನಿಖಾ ಸಮಿತಿಯಲ್ಲಿ ಯೋಜನೆ ವಿಶೇಷ, ಹಣಕಾಸು ವಿಶೇಷ ಆಯುಕ್ತರು, ಕ್ವಾಲಿಟಿ ಚೆಕ್ ಚೀಫ್ ಇಂಜಿನಿಯರ್ ಹಾಗೂ ಟಿವಿಸಿಸಿ ಚೀಫ್ ಇಂಜಿನಿಯರ್ ಒಳಗೊಂಡಿದ್ದಾರೆ ಎನ್ನಲಾಗಿದೆ.
Advertisement