
ಬೆಂಗಳೂರು: ಕೆಆರ್ಎಸ್ ಅಣೆಕಟ್ಟಿನಲ್ಲಿ 27 ಟಿಎಂಸಿ ಅಡಿ ನೀರು ಲಭ್ಯವಿದ್ದು, ಈ ಬಾರಿಯ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಬಗ್ಗೆ ಬೆಂಗಳೂರಿಗರು ಚಿಂತಿಸಬೇಕಾಗಿಲ್ಲ ಏಕೆಂದರೆ ಬೆಂಗಳೂರಿಗೆ ಮುಖ್ಯ ನೀರಿನ ಮೂಲವಾದ ಕೆಆರ್ಎಸ್ ಅಣೆಕಟ್ಟಿನಲ್ಲಿ 6 ಟಿಎಂಸಿ ಅಡಿ ನೀರಿನ ಅವಶ್ಯಕತೆಗೂ ಹೆಚ್ಚಾಗಿ 27 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಹೇಳಿದರು.
ಅಕ್ಟೋಬರ್ 2024 ರಲ್ಲಿ ಬಿಡಬ್ಲ್ಯೂಎಸ್ಎಸ್ಬಿ ದಿನಕ್ಕೆ 775 ಮಿಲಿಯನ್ ಲೀಟರ್ (ಎಂಎಲ್ಡಿ) ನೀರನ್ನು ಪೂರೈಸಿದೆ, ನಗರದ ಹೊರ ಪ್ರದೇಶಗಳಲ್ಲಿ ಮಾತ್ರ ನೀರು ಸರಬರಾಜಿನಲ್ಲಿ ಕೆಲವು ಸಮಸ್ಯೆಗಳಿದ್ದು, ಪೈಪ್ಲೈನ್ ಸಂಪರ್ಕ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ ಬಿಡಬ್ಲ್ಯೂಎಸ್ಎಸ್ಬಿಗೆ ಒಟ್ಟು 35 ಟಿಎಂಸಿಎಫ್ಟಿ ನೀಡಲಾಗುತ್ತಿದ್ದು, ಕಬಿನಿಯಲ್ಲಿ 29 ಟಿಎಂಸಿಎಫ್ಟಿ ಸಂಗ್ರಹವಿದೆ. ಕಳೆದ ವರ್ಷ ಏಪ್ರಿಲ್ 1 ರಂದು, ಕೆಆರ್ಎಸ್ನಲ್ಲಿ ನೀರಿನ ಮಟ್ಟ 13.42 ಟಿಎಂಸಿಎಫ್ಟಿ ಮತ್ತು ಕಬಿನಿಯಲ್ಲಿ 9.39 ಟಿಎಂಸಿಎಫ್ಟಿ ಇತ್ತು. ಈ ಬಾರಿ ಮಳೆ ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ನೀರು ಸಂಗ್ರಹ ಕೂಡ ಹೆಚ್ಚಿದೆ ಎಂದು ಹೇಳಿದರು.
ಪ್ರಸ್ತುತ ಲಭ್ಯವಿರುವ ನೀರಿನ ಸಂಗ್ರಹವು ಎರಡು ಋತುಗಳವರೆಗೂ ಪೂರೈಕೆ ಮಾಡಬಹುದು. ಆದರೆ, ಅಂರ್ಜಲ ಕುಸಿತವಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಮಹದೇವಪುರ ಮತ್ತು ವೈಟ್ಫೀಲ್ಡ್ ಪ್ರದೇಶಗಳಲ್ಲಿನ ಪರಿಸ್ಥಿತಿ ಕಳವಳ ತಂದಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಬೋರ್ವೆಲ್ಗಳ ಕೊರೆಯಲು ಅನುಮತಿಯನ್ನು ಸೀಮಿತಗೊಳಿಸಲಾಗಿದೆ ಎಂದರು,
ಬೆಂಗಳೂರು ಉತ್ತರ, ಮಹದೇವಪುರ ಮತ್ತು ವೈಟ್ಫೀಲ್ಡ್ನ 80 ವಾರ್ಡ್ಗಳಲ್ಲಿ ಅಂತರ್ಜಲ ಮಟ್ಟ ಅತ್ಯಂತ ಕಡಿಮೆಯಾಗಿದೆ. ಹೀಗಾಗಿ, ಬಿಡಬ್ಲ್ಯೂಎಸ್ಎಸ್ಬಿ 'ಸಂಚಾರಿ ಕಾವೇರಿ ನೀರು ಸರಬರಾಜು' ಯೋಜನೆಯನ್ನು ಪ್ರಾರಂಭಿಸಿದ್ದು, ಕೈಗೆಟುಕುವ ದರದಲ್ಲಿ ಟ್ಯಾಂಕರ್ಗಳ ಮೂಲಕ ನೀರು ಪೂರೈಸುತ್ತಿದೆ ಎಂದು ತಿಳಿಸಿದ್ದಾರೆ.
ನಿರ್ಬಂಧಿತ ಪ್ರದೇಶಗಳಲ್ಲಿರುವ ಜನರು ಕುಡಿಯುವ ನೀರಿಗಾಗಿ ಕಾವೇರಿ ಸಂಪರ್ಕವನ್ನು ಪಡೆಯಬೇಕು ಅಥವಾ ಟ್ಯಾಂಕರ್ ನೀರು ಪೂರೈಕೆಗಾಗಿ ಬಿಡಬ್ಲ್ಯೂಎಸ್ಎಸ್ಬಿಯನ್ನು ಸಂಪರ್ಕಿಸಬೇಕು. ಅಕ್ರಮ ಬೋರ್ವೆಲ್ಗಳನ್ನು ಕೊರೆಯುವುದು ಕಂಡು ಬಂದಿದ್ದೇ ಆದರೆ ಎಫ್ಐಆರ್ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ 27 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ವಾಹನಗಳನ್ನು ಸ್ವಚ್ಛಗೊಳಿಸಲು, ಗೇಟ್ಗಳ ಬಳಿಯ ಪ್ರದೇಶಗಳು ಮತ್ತು ನಿರ್ಮಾಣ ಕಾರ್ಯಗಳಿಗೆ ಕುಡಿಯುವ ನೀರನ್ನು ಬಳಸಿದ್ದಕ್ಕಾಗಿ 412 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
Advertisement