
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ ನಡುವಣ ಪಂದ್ಯಕ್ಕೆ ಅಕ್ರಮವಾಗಿ ಟಿಕೆಟ್ ಮಾರಾಟ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ಚಂಡೀಗಢ ಮೂಲದ ಮನೋಜ್ ಖಾಂಡೆ (28), ಈತನ ಸಹಚರ ಹಾಗೂ ಆರ್ಟಿ ನಗರದ ನಿವಾಸಿ ಸಂತೋಷ್ (28), ತಮಿಳುನಾಡು ಮೂಲದ ಹೇಮಂತ್ ಕುಮಾರ್ (34), ಸಾಯಿಪ್ರಸಾದ್ (19), ಜಯನಗರದ ಭರತ್ (19), ಹಲಸೂರಿನ ಬಿ. ನರೇಂದ್ರಕುಮಾರ್ (63), ದೊಮ್ಮಲೂರಿನ ಎಲ್. ಶಿವರಾಜ್ಕುಮಾರ್ (32) ಎಂದು ಗುರ್ತಿಸಲಾಗಿದೆ.
ಆರೋಪಿಗಳನ್ನು ಬಲೆಗೆ ಬೀಳಿಸಲು ಕ್ರಿಕೆಟ್ ಅಭಿಮಾನಿಗಳಂತೆ ನಟಿಸಿದ ಸಿಸಿಬಿ ಅಧಿಕಾರಿಗಳು, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ಆರೋಪಿಗಳು 1,200 ರೂ. ಬೆಲೆಯ ಟಿಕೆಟ್ಗಳನ್ನು 7,000 ರೂ.ಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇದರ ಆಧಾರದ ಮೇಲೆ ಸಂತೋಷ್ನನ್ನು ಬಂಧನಕ್ಕೊಳಪಡಿಸಿದ್ದು, ಟಿಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕ್ಯಾಂಟೀನ್ ವ್ಯವಸ್ಥಾಪಕ ಶಿವಕುಮಾರ್ ಎಚ್ ಮತ್ತು ಸಿಬ್ಬಂದಿ ನಾಗರಾಜ್ ಕೆ ಎಂಬ ಇಬ್ಬರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗಿದ್ದು, ಅವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ 5,000 ರಿಂದ 10,000 ರೂ.ವರೆಗೆ ಕಾಂಪ್ಲಿಮೆಂಟರಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚೆರಿಯನ್ ಎಂಬ ವ್ಯಕ್ತಿಗೆ ಪಂದ್ಯ ವೀಕ್ಷಣೆಗೆ ಖಾಸಗಿ ಕಂಪನಿಯಿಂದ ಕಾಂಪ್ಲಿಮೆಂಟರಿ ಟಿಕೆಟ್ ದೊರೆದಿದ್ದು, ಈ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಮತ್ತೊಂದು ಪ್ರಕರಣದಲ್ಲಿ ಪಂದ್ಯದ ಸಮಯದಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದ ಮಂಜುನಾಥ್ ಎಂಬ ಆರೋಪಿಯನ್ನು ಪೊಲೀಸರು ಬಂದನಕ್ಕೊಳಪಡಿಸಿದ್ದಾರೆ. ಐಪಿಎಲ್ ಟಿಕೆಟ್ಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಮೂರು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದಾರೆ.
Advertisement