ರಸ್ತೆ ಗುಂಡಿ ದುರಸ್ತಿ: ಕ್ಷಣಾರ್ಧದಲ್ಲಿ ಸಮಸ್ಯೆ ದೂರಾಗಿಸಲು Ecofix ಬಳಕೆಗೆ ಸರ್ಕಾರ ಮುಂದು, ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ

ನಗರ ಪ್ರದೇಶಗಳಲ್ಲಿ ಅತಿಯಾಗಿ ಸಂಚಾರ ದಟ್ಟಣೆ ಇರುವುದರಿಂದ ಗುಂಡಿಗಳನ್ನು ಮುಚ್ಚಲು ಸಮಯ ಅವಕಾಶ ಕಡಿಮೆಯಿರುತ್ತದೆ.
file pic
ರಸ್ತೆ ಗುಂಡಿ (ಸಾಂಕೇತಿಕ ಚಿತ್ರ)online desk
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎಷ್ಟೇ ಅಭಿವೃದ್ಧಿಗೊಂಡರೂ ಇಲ್ಲಿನ ರಸ್ತೆ ಗುಂಡು ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ದಿಢೀರನೆ ಉದ್ಭವವಾಗುವ ಗುಂಡಿಗಳಿಂದಾಗಿ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದ ಘಟನೆಗಳು ಪ್ರತಿ ನಿತ್ಯ ನಡೆಯುತ್ತಲೇ ಇರುತ್ತವೆ. ಈ ಸಮಸ್ಯೆಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದ್ದು, ಇಕೋಫಿಕ್ಸ್ ಬಳಕೆಗೆ ನಿರ್ಧರಿಸಿದೆ. ಇದರಂತೆ ಗುರುವಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ - ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (CSIR-CRRI), ಲೋಕೋಪಯೋಗಿ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ, ರಾಮುಕಾ ಗ್ಲೋಬಲ್ ಸರ್ವೀಸಸ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ - ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಯು ತೇವಾಂಶವಿರುವ ರಸ್ತೆಗಳಲ್ಲಿಯೂ ಕೂಡ ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲದೆ ಕಡಿಮೆ ಸಮಯದಲ್ಲಿ ಗುಂಡಿ ಮುಚ್ಚಲು ಸಾಧ್ಯವಾಗುವಂತೆ ಎಕೋಫಿಕ್ಸ್ ಎಂಬ ರೆಡಿಮಿಕ್ಸ್ ಪದಾರ್ಥವನ್ನು ಬಳಸಿಕೊಂಡು ರಸ್ತೆಯ ಗುಂಡಿಗಳನ್ನು ಮುಚ್ಚುವುದನ್ನು ಕಂಡುಹಿಡಿದಿದ್ದು, ಇದರಿಂದಾಗಿ ಅತಿಯಾಗಿ ಮಳೆಯಾಗುವ ಜಿಲ್ಲೆಗಳಲ್ಲಿ ಆಗಿಂದಾಗ್ಗೆ ಉಂಟಾಗುವ ರಸ್ತೆ ಗುಂಡಿಗಳನ್ನು ತೇವಾಂಶ ಇದ್ದಾಗಲೂ ಕೂಡ ಕಡಿಮೆ ಸಮಯದಲ್ಲಿ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಸರ್ಕಾರವು, ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ ಹಾಗೂ ರಾಮುಕ ಗ್ಲೋಬಲ್ ಸರ್ವಿಸಸ್ ರವರ ಸಹಯೋಗದೊಂದಿಗೆ ರಾಜ್ಯ ಹೆದ್ದಾರಿ 265 ರ ರಸ್ತೆಯಲ್ಲಿ ಪ್ರಾಯೋಗಿಕವಾಗಿ 2024ನೇ ಡಿಸೆಂಬರ್ 10 ರಂದು ಗುಂಡಿ ಮುಚ್ಚುವ ಕಾರ್ಯ ಮಾಡಲಾಗಿದ್ದು, ಇದರ ಫಲಿತಾಂಶದ ಆಧಾರದ ಮೇಲೆ ರಾಜ್ಯದಾದ್ಯಂತ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.

file pic
BBMP: 'ಕಸ ಸಂಗ್ರಹಣೆ, ರಸ್ತೆ ಬದಿ ಪಾರ್ಕಿಂಗ್ ಗೆ ನಾವು ಹಣ ಕೊಡಲ್ಲ': ಸರ್ಕಾರದ ವಿರುದ್ಧ ನಾಗರೀಕರ ಸಹಿ ಅಭಿಯಾನ!

ನಗರ ಪ್ರದೇಶಗಳಲ್ಲಿ ಅತಿಯಾಗಿ ಸಂಚಾರ ದಟ್ಟಣೆ ಇರುವುದರಿಂದ ಗುಂಡಿಗಳನ್ನು ಮುಚ್ಚಲು ಸಮಯ ಅವಕಾಶ ಕಡಿಮೆಯಿರುತ್ತದೆ. ಹೀಗಾಗಿ ಸಂಚಾರ ದಟ್ಟಣೆ ಕಡಿಮೆಯಿದ್ದಾಗ ಅಂದರೆ ರಾತ್ರಿ ಸಮಯದಲ್ಲಿ ಎಕೋಫಿಕ್ಸ್ ಉಪಯೋಗಿಸಿ ಗುಂಡಿಗಳನ್ನು ಸಮತಟ್ಟು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಕೋಫಿಕ್ಸ್ 30ಕೆ.ಜಿ ಹಾಗೂ 50ಕೆ.ಜಿ ಚೀಲಗಳಲ್ಲಿ ಲಭ್ಯವಿದ್ದು, ಅದನ್ನು ಕಾಮಗಾರಿ ಸ್ಥಳಕ್ಕೆ ಸರಾಗವಾಗಿ ಸಾಗಿಸಬಹುದಾಗಿರುತ್ತದೆ. ಏಕರೂಪ ದರಪಟ್ಟಿಯಲ್ಲಿ ಕೋಲ್ಡ್ ಮಿಕ್ಸ್ ಪದ್ಧತಿಯಲ್ಲಿ ಗುಂಡಿ ಮುಚ್ಚಲು ತಗಲುವ ಮೊತ್ತ ರೂ. 17/- ಪ್ರತಿ ಕೆ.ಜಿ.ಗೆ ನಿಗಧಿಪಡಿಸಲಾಗಿರುತ್ತದೆ. ಎಕೋಫಿಕ್ಸ್ ಪದ್ಧತಿಯಲ್ಲಿ ಸರಬರಾಜು ಮಾಡಿ ಗುಂಡಿ ಮುಚ್ಚಲು ರೂ.15.70/- ಪ್ರತಿ ಕೆ.ಜಿ. ರಂತೆ ಮಾಡಲು ಮೆ:ರಾಮುಕ ಗ್ಲೋಬಲ್ ಸರ್ವಿಸಸ್ ರವರು ಒಪ್ಪಿಕೊಂಡಿರುತ್ತಾರೆ. ಇದರಿಂದಾಗಿ ಗುಂಡಿ ಮುಚ್ಚುವ ವೆಚ್ಚದಲ್ಲಿ ಸುಮಾರು ಶೇ.10 ರಷ್ಟು ಮೊತ್ತ ಸರ್ಕಾರಕ್ಕೆ ಉಳಿತಾಯವಾಗಲಿದೆ. ಜೆ.ಎಸ್.ಡಬ್ಲ್ಯೂ, ಬಳ್ಳಾರಿ ರವರ ಸಹಯೋಗದೊಂದಿಗೆ ರಾಮುಕ ಗ್ಲೋಬಲ್ ಸರ್ವೀಸಸ್ ರವರು Ecofix Ready to Use Pot hole repair mix ಉತ್ಪಾದನೆ ಮಾಡಿ ಕಡಿಮೆ ದರದಲ್ಲಿ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಸರಬರಾಜು ಮಾಡಲು ಒಪ್ಪಿಗೆ ನೀಡಿದ್ದಾರೆ.

ಲೋಕೋಪಯೋಗಿ ಇಲಾಖೆಯ ಇಲಾಖೆಯ ಎಲ್ಲಾ ಅಭಿಯಂತರರುಗಳಿಗೆ ಹಂತ ಹಂತವಾಗಿ ಎಕೋಫಿಕ್ಸ್ ಉಪಯೋಗಿಸುವುದರ ಬಗ್ಗೆ ತರಬೇತಿ ನೀಡಲಾಗುವುದು. ಇದರಿಂದಾಗಿ ಅತಿ ತುರ್ತಾಗಿ ಗುಂಡಿ ಮುಚ್ಚಿ, ಸಾರ್ವಜನಿಕರಿಗೆ ಹೆಚ್ಚಿನ ಅನೂಕೂಲವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com