
ಬೆಂಗಳೂರು: ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರ ಜತೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇದರ ನಡುವೆ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅದರ ಹೊರತಾಗಿಯೂ ಪಟ್ಟು ಬಿಡದ ಸಾರಿಗೆ ನೌಕರರು ಮಂಗಳವಾರ ಬೆಳಗ್ಗೆಯಿಂದಲೇ ಮುಷ್ಕರವನ್ನು ಆರಂಭಿಸಿದೆ.
ಸಾರಿಗೆ ನೌಕರರ ಮುಷ್ಕರದ ಪರಿಣಾಮ ರಾಜ್ಯಾದ್ಯಂತ ಬಸ್ಸುಗಳ ಸೇವೆ ವ್ಯತ್ಯಯವಾಗಿ ಹಲವಾರು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಹೀಗಿದ್ದರೂ, ಯಾವುದೇ ಚಿಂತೆ ಬೇಡ ಎಂದು ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಅಭಯ ನೀಡಿದೆ, ಸಾರಿಗೆ ನಿಗಮಗಳು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿವೆ ಎಂದು ತಿಳಿಸಿದೆ.
ರಾಜ್ಯ ಸರ್ಕಾರದ ಈ ಸೂಚನೆ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ಮಾಡಿಕೊಂಡಿವೆ.
ನಾಲ್ಕೂ ನಿಗಮಗಳಲ್ಲಿ ಸುಮಾರು 1,700 ಎಲೆಕ್ನಿಕ್ ಬಸ್ಗಳು ಸೇವೆ ನೀಡುತ್ತಿವೆ. ಅದರಲ್ಲಿ ಬಿಎಂಟಿಸಿ ಒಂದರಲ್ಲೇ 1,500 ಎಲೆಕ್ನಿಕ್ ಬಸ್ಗಳು ಸಂಚರಿಸುತ್ತಿವೆ. ಆ ಬಸ್ ಗಳಲ್ಲಿ ಖಾಸಗಿ ಚಾಲಕರನ್ನು ನಿಯೋಜಿಸಲಾಗಿದೆ. ಆ ಚಾಲಕರು ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದ್ದರಿಂದ ಎಲೆಕ್ಟಿಕ್ ಬಸ್ಗಳು ಮುಷ್ಕರದ ಸಂದರ್ಭದಲ್ಲಿ ಸೇವೆ ನೀಡಲಿವೆ.
ಈ ನಡುವೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ (ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ) ಸಾರಿಗೆ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದಿನಿಂದ ರಾಜ್ಯಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಸಾರಿಗೆ ನೌಕರರ ಮುಷ್ಕರ ತಡೆಯಲು ಸರ್ಕಾರ ಸಾಕಷ್ಟು ಯತ್ನಗಳನ್ನು ನಡೆಸಿದೆ. ಸಾರಿಗೆ ಸೇವೆ ಅಗತ್ಯ ಸೇವೆ ವ್ಯಾಪ್ತಿಯಲ್ಲಿ ಬರುವ ಕಾರಣದಿಂದಾಗಿ ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಈಗಾಗಲೇ ಎಸ್ಮಾ ಜಾರಿಗೊಳಿಸಲಾಗಿದೆ. ಅದರ ಜತೆ ರಜೆಯಲ್ಲಿರುವ ನೌಕರರಿಗೆ ರಜೆ ರದ್ದುಗೊಳಿಸಿ, ಕರ್ತವ್ಯಕ್ಕೆ ಹಾಜರಾಗುವಂತೆಯೂ ಸೂಚಿಸಲಾಗಿದೆ.
ಇನ್ನು, ಎಲ್ಲ ಘಟಕಗಳಲ್ಲೂ ನೌಕರರಿಗೆ ಆಯಾ ಘಟಕ ವ್ಯವಸ್ಥಾಪಕರ ಮೂಲಕ ಹೈಕೋರ್ಟ್ ಆದೇಶ ಮತ್ತು ಎಸ್ಮಾ ಜಾರಿಯಲ್ಲಿರುವ ಕಾರಣ ಯಾರೂ ಮುಷ್ಕರದಲ್ಲಿ ಭಾಗಿಯಾದಂತೆ ಸೂಚನೆಯನ್ನೂ ನೀಡಲಾಗಿದೆ. ಒಂದು ವೇಳೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮತ್ತು ಕರ್ತವ್ಯ ಹಾಜರಾಗದವರಿಗೆ ವೇತನ ನೀಡದಿರಲೂ ಸಾರಿಗೆ ನಿಗಮಗಳು ನಿರ್ಧರಿಸಿವೆ.
ಇದಲ್ಲದೆ, ಸರ್ಕಾರದ ನಿಲುವು ತಿಳಿಯುವ ಸಂಬಂಧ ಸಾರಿಗೆ ನೌಕರರು ಮುಷ್ಕರದ ಆರಂಭವನ್ನು ಒಂದು ದಿನದ ಮಟ್ಟಿಗೆ ತಡೆಯುವಂತೆ ಸಾರಿಗೆ ನೌಕರರಿಗೆ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ. ಆದರೂ, ನೌಕರರು ತಮ್ಮ ಪಟ್ಟಿನಿಂದ ಹಿಂದೆ ಸರಿದಿಲ್ಲ.
ಈ ಆದೇಶದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿಸಿಲ್ಲ ಹಾಗೂ ಹೈಕೋರ್ಟ್ ಆದೇಶ ದೊರೆಯುವಲ್ಲಿ ವಿಳಂಬವಾದ ಕಾರಣ ಮುಷ್ಕರ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ.
Advertisement